ನವದೆಹಲಿ (ಪಿಟಿಐ): ಬಾಬರಿ ಮಸೀದಿ ಧ್ವಂಸ ಕುರಿತು ಕೋಬ್ರಾ ಪೋಸ್ಟ್ ನ್ಯೂಸ್ ವೆಬ್ಸೈಟ್ ಮಾಡಿರುವ ಕುಟುಕು ಕಾರ್ಯಾಚರಣೆಯನ್ನು ನಿಷೇಧಿಸುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಶುಕ್ರವಾರ ಮನವಿ ಮಾಡಿದೆ.
ಈ ಕುಟುಕ ಕಾರ್ಯಾಚರಣೆಯನ್ನು ಪ್ರಶ್ನಿಸಿರುವ ಬಿಜೆಪಿ ’ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಕುಟುಕು ಕಾರ್ಯಾಚರಣೆ ಮಾಹಿತಿಯನ್ನು ಚುನಾವಣೆ ಸಂದರ್ಭದಲ್ಲಿ ಪ್ರಸಾರ ಮಾಡಿರುವ ಉದ್ದೇಶವಾದರೂ ಏನು ಎಂದು ಬಿಜೆಪಿಯ ಹಿರಿಯ ವಕ್ತಾರ ಮುಕ್ತಾರ್ ಅಬ್ಬಾಸ್ ನಖ್ವಿ ಪ್ರಶ್ನಿಸಿದ್ದಾರೆ.
ಇದು ಕಾಂಗ್ರೆಸ್ ಪಕ್ಷದ ಪಿತೂರಿ, ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮತ ಪಡೆಯುವ ಹುನ್ನಾರ ಎಂದು ನಖ್ವಿ ಕಟುವಾಗಿ ಟೀಕಿಸಿದ್ದಾರೆ.
ಚುನಾವಣೆ ಆಯೋಗ ಈ ಕೂಡಲೇ ಕೋಬ್ರಾ ಪೋಸ್ಟ್ ಬಿಡುಗಡೆ ಮಾಡಿರುವ ಸಿ.ಡಿ. ಯನ್ನು ನಿಷೇಧಿಸುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಮತ್ತು ಆ ವೆಬ್ಸೈಟ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ಎಚ್ಚರಿಸಿದರು.