ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಬ್‌ ಡಿಕ್ಕಿ: ಬಿ.ಟೆಕ್ ಪದವೀಧರೆ ಸಾವು

Last Updated 3 ಜೂನ್ 2015, 19:58 IST
ಅಕ್ಷರ ಗಾತ್ರ

ಬೆಂಗಳೂರು: ಹೆಣ್ಣೂರು ಹೊರ ವರ್ತುಲ ರಸ್ತೆಯಲ್ಲಿ ಮಂಗಳವಾರ ರಾತ್ರಿ ಬೈಕ್‌ಗೆ ಕ್ಯಾಬ್‌ ಡಿಕ್ಕಿ ಹೊಡೆದು ಹೈದರಾಬಾದ್ ಮೂಲದ ಬಿ.ಟೆಕ್ ಪದವೀಧರೆ ಅನ್ವಿತಾ (24) ಎಂಬುವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತರ ಸ್ನೇಹಿತ ಸಿದ್ಧಾರ್ಥ್ ನಾಯರ್ ಕೂಡ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೂರತ್‌ನಲ್ಲಿ ಕಳೆದ ವರ್ಷ ಬಿ.ಟೆಕ್‌ ಮುಗಿಸಿದ ಅನ್ವಿತಾ, ಮಾರತ್ತಹಳ್ಳಿ ಸಮೀಪದ ಕಾರ್ತಿಕ್‌ನಗರದಲ್ಲಿ ನೆಲೆಸಿರುವ ಸಂಬಂಧಿಕರನ್ನು ಭೇಟಿಯಾಗಲು ಸೋಮವಾರ ಬೆಳಿಗ್ಗೆಯಷ್ಟೇ ನಗರಕ್ಕೆ ಬಂದಿದ್ದರು. ಸಂಜೆ ವೇಳೆಗೆ ಅವರು ತಮ್ಮ ಸಹಪಾಠಿಗಳನ್ನು ಭೇಟಿಯಾಗಲು ಹೆಣ್ಣೂರಿನ ಪ್ರಕೃತಿ ಲೇಔಟ್‌ಗೆ ತೆರಳಿದ್ದರು.

ಸ್ನೇಹಿತರ ಜತೆ ಔತಣ ಕೂಟ ಮುಗಿಸಿದ ಅನ್ವಿತಾ, ವಾಪಸ್ ಹೈದರಾಬಾದ್‌ಗೆ  ಹೊರಟಿದ್ದರು. ಹೀಗಾಗಿ ಸಿದ್ಧಾರ್ಥ್‌, ಬಸ್‌ ನಿಲ್ದಾಣಕ್ಕೆ ಬಿಟ್ಟು ಬರಲು ರಾತ್ರಿ 12.30ರ ಸುಮಾರಿಗೆ ಗೆಳತಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೆಣ್ಣೂರು ಹೊರ ವರ್ತುಲ ರಸ್ತೆಯಲ್ಲಿ ಸಾಗುತ್ತಿದ್ದಾಗ ಹಿಂದಿನಿಂದ ಬಂದ ಕ್ಯಾಬ್ ಡಿಕ್ಕಿ ಹೊಡೆಯಿತು.

ಮುಖಕ್ಕೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಅನ್ವಿತಾ ಸ್ಥಳದಲ್ಲೇ ಕೊನೆಯುಸಿರೆಳೆದರು. ಸಿದ್ಧಾರ್ಥ್‌ ಅವರನ್ನು ಇತರೆ ವಾಹನಗಳ ಸವಾರರು ಆಸ್ಪತ್ರೆಗೆ ದಾಖಲಿಸಿದರು. ಆರೋಪಿ ಚಾಲಕ ಕ್ಯಾಬ್‌ ನಿಲ್ಲಿಸದೆ ಪರಾರಿಯಾಗಿದ್ದಾನೆ. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿ ಕ್ಯಾಬ್‌ ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದರು.

ಮತ್ತೊಂದು ಪ್ರಕರಣ: ರಾಜಾಜಿನಗರದ ಪಶ್ಚಿಮ ಕಾರ್ಡ್‌ ರಸ್ತೆಯ ಶಿವನಹಳ್ಳಿ ಜಂಕ್ಷನ್‌ನಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಖಾಸಗಿ ಕಂಪೆನಿಯೊಂದರ ಭದ್ರತಾ ಸಿಬ್ಬಂದಿ ಚಂದ್ರಶೇಖರ್ (52) ಪ್ರಾಣ ಕಳೆದುಕೊಂಡಿದ್ದಾರೆ.

ರಾಮಚಂದ್ರಪುರ ನಿವಾಸಿಯಾದ ಚಂದ್ರಶೇಖರ್, ಶಿವನಹಳ್ಳಿಯಲ್ಲಿರುವ ತಮ್ಮ ಸೋದರನ ಮನೆಗೆ ಹೋಗಿದ್ದರು. ಅಲ್ಲಿ ಊಟ ಮುಗಿಸಿ ರಾತ್ರಿ 10.30ರ ಸುಮಾರಿಗೆ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ರಸ್ತೆ ದಾಟುತ್ತಿದ್ದ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರಾದರೂ, ಮಾರ್ಗಮಧ್ಯೆ ಚಂದ್ರಶೇಖರ್ ಮೃತಪಟ್ಟರು. ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT