ನವದೆಹಲಿ (ಪಿಟಿಐ): ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್ಮಸ್ ದಿನದಂದು ಶಾಲೆಗಳು ಯಥಾರೀತಿ ಕಾರ್ಯನಿರ್ವಹಿಸುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆ ಬುಧವಾರ ಲೋಕಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಸರ್ಕಾರ ಸಂಘ ಪರಿವಾರದ ಗುಪ್ತ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ಹೊರಟಿದೆ ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡವು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವಾದ ಡಿಸೆಂಬರ್ 25ರಂದು ಸರ್ಕಾರ ‘ಉತ್ತಮ ಆಡಳಿತ ದಿವಸ’ ಆಚರಣೆಗೆ ನಿರ್ಧರಿಸಿದೆ. ಇದರಿಂದ ಕ್ರಿಸ್ಮಸ್ ರಜೆಗೆ ತೊಂದರೆಯಾಗದು ಎಂದು ಸರ್ಕಾರ ಸಮಜಾಯಿಷಿ ನೀಡಿತು.
ಇದರಿಂದ ತೃಪ್ತರಾಗದ ಕಾಂಗ್ರೆಸ್, ಟಿಎಂಸಿ, ಎನ್ಸಿಪಿ ಸೇರಿದಂತೆ ವಿರೋಧ ಪಕ್ಷಗಳು ಕಲಾಪ ಬಹಿಷ್ಕರಿಸಿ ಹೊರ ನಡೆದವು.
ವಾಜಪೇಯಿ ಜನ್ಮದಿನದ ಪ್ರಯುಕ್ತ ‘ಉತ್ತಮ ಆಡಳಿತ ದಿವಸ’ ಆಚರಿಸಲು ಎಲ್ಲ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಡಿಸೆಂಬರ್ 25ರಂದು ರಜೆ ನೀಡದೆ, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ವಾಜಪೇಯಿ ಜನ್ಮದಿನ ಆಚರಣೆ ತಪ್ಪೇನು? |
ಕಾರ್ಯಕ್ರಮ ಆಯೋಜಿಸಿದಕ್ಕೆ ಸಾಕ್ಷ್ಯವಾಗಿ ಛಾಯಾಚಿತ್ರ ಹಾಗೂ ವಿಡಿಯೊಗಳನ್ನು ಕಳಿಸು ವಂತೆ ಸರ್ಕಾರ ಸೂಚಿಸಿದೆ ಎಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಸದನದ ಗಮನಕ್ಕೆ ತಂದರು. ಸರ್ಕಾರದ ಪರ ಉತ್ತರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ವಿರೋಧ ಪಕ್ಷಗಳು ದೇಶವನ್ನು ದಾರಿ ತಪ್ಪಿಸುತ್ತಿವೆ ಎಂದು ಹರಿಹಾಯ್ದರು.
ಇದೇ ವೇಳೆ ಗಾಂಧಿ ಕುಟುಂಬದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ನಾಯ್ಡು, ‘ಕುಟುಂಬದ ಜತೆ ದೇಶದ ವಿನಾಶ, ಕಾಂಗ್ರೆಸ್ ವಿನಾಶ’ ಎಂದು ಛೇಡಿಸಿದರು. ಇದು ಕಾಂಗ್ರೆಸ್ಸಿಗರನ್ನು ತೀವ್ರವಾಗಿ ಕೆರಳಿಸಿತು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಅವರು ಹೊರ ನಡೆದರು.
ಗೊಂದಲ ಪರಿಹಾರಕ್ಕೆ ಈ ಕುರಿತು ಮಾನವ ಸಂಪನ್ಮೂಲ ಸಚಿವಾಲಯದಿಂದ ಹೆಚ್ಚಿನ ಮಾಹಿತಿ ಕೋರಿದ್ದೇನೆ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ತಿಳಿಸಿದರು. ಡಿ.25ರಂದು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ರಜೆ ನೀಡಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸ್ಪಷ್ಟಪಡಿಸಿದರು.
ಸುತ್ತೋಲೆಯಲ್ಲಿ ಏನಿದೆ?
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಿಂದೂ ಮಹಾಸಭಾ ನಾಯಕ ಮದನ್ ಮೋಹನ್ ಮಾಳವೀಯ ಜನ್ಮದಿನದ ಪ್ರಯುಕ್ತ ಡಿಸೆಂಬರ್ 25ರಂದು ‘ಉತ್ತಮ ಆಡಳಿತ ದಿನ’ ಆಚರಿಸಲು ಸರ್ಕಾರ ನಿರ್ಧರಿಸಿದೆ.
ಅಂದು ಕೇಂದ್ರೀಯ ಹಾಗೂ ನವೋದಯ ಹಾಗೂ ಸಿಬಿಎಸ್ಇ ಶಾಲೆಗಳು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಹಾಗೂ ಸರ್ಕಾರದ ಉತ್ತಮ ಆಡಳಿತ ಕುರಿತು ಕಿರುಚಿತ್ರ ಪ್ರದರ್ಶನ ಏರ್ಪಡಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸುತ್ತೋಲೆ ಹೊರಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.