ಉಡುಪಿ: ‘ಕ್ರೈಸ್ತ ಸಮುದಾಯವನ್ನು ರಾಜಕೀಯದಲ್ಲಿ ಬಲಿಷ್ಠಗೊಳಿಸುವಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು’ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ ಹೇಳಿದರು.
ಲಕ್ಷ್ಮೀನರಸಿಂಹ ರೋಟರಿ ಕಲಾಮಂದಿರದಲ್ಲಿ ಭಾನುವಾರ ನಡೆದ ಕೆಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸಿದಾಗ ಅಂತಹ ಸಂಘಟನೆ ಯಶಸ್ವಿಯಾಗಿ ಮುಂದವರಿಯುತ್ತದೆ. ಕೆಥೊಲಿಕ್ ಸಭಾ ದೀನದಲಿತರು ಹಾಗೂ ಅಶಕ್ತರನ್ನು ಗುರುತಿಸಿ ಅಂತಹವರಿಗೆ ಹೆಚ್ಚು ಸಹಾಯ ಮಾಡಬೇಕು ಎಂದು ಹೇಳಿದರು.
ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಎಲ್ರಾಯ್ ಕಿರಣ್ ಕ್ರಾಸ್ತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಳೆದ ೨೫ ವರ್ಷಗಳಲ್ಲಿ ವಲಯ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರಿಗೆ, ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಹಕಾರ ಸಂಸ್ಥೆಗಳ ನಿರ್ದೇಶಕರನ್ನು ಸನ್ಮಾನಿಸಲಾಯಿತು.
ವಲಯ ಸಮಿತಿಯ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷೆ ಫ್ಲೇವಿ ಡಿಸೋಜಾ, ವಲಯ ಸಮಿತಿಯ ನಿರ್ದೇಶಕ ಅನಿಲ್ ಡಿಸೋಜಾ, ಕಾರ್ಯದರ್ಶಿ ಮೇಬಲ್ ಡಿಸೋಜಾ, ಕೋಶಾಧಿಕಾರಿ ಮೈಕಲ್ ಪಿಂಟೊ, ಸುವರ್ಣ ಸಮಿತಿಯ ಸಂಚಾಲಕ ಆಲ್ವಿನ್ ಕ್ವಾಡ್ರಸ್,
ನಿಯೋಜಿತ ಅಧ್ಯಕ್ಷ ಪ್ಯಾಟ್ರಿಕ್ ಮೆಂಡೊನ್ಸಾ, ವಲೇರಿಯನ್ ಮಿನೇಜಸ್, ವಿನೋದ್ ಕ್ರಾಸ್ತಾ ಉಪಸ್ಥಿತರಿದ್ದರು. ರೆನಿಟಾ ಬಾರ್ನೆಸ್ ಹಾಗೂ ಫ್ಲೈವನ್ ಡಿಸೋಜಾ ನಿರೂಪಿಸಿದರು.