ಗಂಗಾವತಿ: ಜಯನಗರದ ರಸ್ತೆಯಲ್ಲಿರುವ ವಿದ್ಯಾಗಿರಿಯ ಮಾಂತಗೊಂಡ ನೀಲಮ್ಮ ಮೂಕಪ್ಪ (ಎಂಎನ್ಎಂ) ಪ್ರೌಢಶಾಲೆಯಲ್ಲಿ 1989–-90ನೇ ಸಾಲಿನಲ್ಲಿ ಹತ್ತನೇ ತರಗತಿ ಪೂರೈಸಿದ ಹಳೆಯ ವಿದ್ಯಾರ್ಥಿಗಳ ತಂಡ ಶುಕ್ರವಾರ ಗುರುವಂದನೆ, ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿ ಕೂಟ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.
25 ವಸಂತದ ನೆನಪಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಮರೇಶ ಕುಳಗಿ, ತಮಗೆ ಕಲಿಸಿದ ಗುರುಗಳ ಪಾದಪೂಜೆ ಮಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿ ಅವರು, ನಾವು ಕಲಿತ ಈ ಶಾಲೆ, 80–-90ರ ದಶಕದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಕಲಿಸುವುದರಲ್ಲಿ ಮುಂಚೂಣಿಯಲ್ಲಿತ್ತು. ಕಲ್ಲಿನಂತೆ ಇದ್ದ ನಮ್ಮಂಥ ನೂರಾರು ಜನರನ್ನು ಶಿಲ್ಪಗಳಂತೆ ಕೆತ್ತಿ ಸಮಾಜಕ್ಕೆ ನೀಡಿದ ಹೆಮ್ಮೆ ಈ ಸಂಸ್ಥೆ ಮತ್ತು ಗುರುಗಳದ್ದು. ಶುಲ್ಕ ಪಾವತಿಗೂ ಕಷ್ಟವಿದ್ದ ಸಂದರ್ಭದಲ್ಲಿ ನೂರಾರು ಮಕ್ಕಳಿಗೆ ಶಾಲೆಗೆ ಮುಕ್ತವಾಗಿ ಪ್ರವೇಶ ನೀಡಲಾಯಿತು. ಶಿಕ್ಷಕರ ಶ್ರಮದಿಂದ ನಮ್ಮೊಂದಿಗಿನ ಸಹಪಾಠಿಗಳು ಇಂದು ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದೇವೆ ಎಂದರು.
ಹೆಬ್ಬಾಳ ಬೃಹನ್ಮಠ ನಾಗಭೂಷಣ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಅರಳಹಳ್ಳಿಯ ಗವಿಸಿದ್ದಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಳೆ ವಿದ್ಯಾರ್ಥಿಗಳಾದ ಪಂಪಣ್ಣ ನಾಯಕ, ವೀಣಾ, ತಿಪ್ಪೇಸ್ವಾಮಿ, ಮಹಾಂತ ಶಿವಯೋಗಿ ಅನಿಸಿಕೆ ವ್ಯಕ್ತಪಡಿಸಿದರು.
ಮುಖ್ಯಗುರು ವೀರಣ್ಣ ಅರಹುಣಸಿ, ನಿವೃತ್ತ ಶಿಕ್ಷಕರಾದ ನಿಜಲಿಂಗಪ್ಪ ಮೆಣಸಗಿ, ಬಸನಗೌಡ, ವನಜಾಕ್ಷಿ, ವೀರಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ.ಶಂಭುಲಿಂಗಪ್ಪ, ವಕೀಲ ಶ್ರೀಕುಮಾರ ಐಲಿ, ಮಾಂತಗೊಂಡ ಸರೋಜಮ್ಮ, ಎಂ. ರವೀಂದ್ರ, ಎಂ.ಸರ್ವೇಶ ಇದ್ದರು.