ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಜಲ ಬಳಸಿ-ಭೂಸಾರ ಉಳಿಸಿ

Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

ಗಂಜಲದ ಹಕ್ಕು ಸ್ವಾಮ್ಯಕ್ಕೆ (ಪೇಟೆಂಟ್) ಅಮೆರಿಕ ವಿಶ್ವಮಟ್ಟದಲ್ಲಿ ಹೋರಾಟ ನಡೆಸಿದರೂ ವಿಫಲವಾಗಿದೆ.  ಆದರೆ ನಮ್ಮಲ್ಲೇ ಇರುವ ಗಂಜಲವನ್ನು ವ್ಯರ್ಥ ಮಾಡುವವರೇ ಹೆಚ್ಚು. ಮಣ್ಣು ಹಾಗೂ ಜನರ ಆರೋಗ್ಯ ಕಾಪಿಡುವ ಗಂಜಲದ ಕುರಿತು ಇನ್ನಷ್ಟು ತಿಳಿವಳಿಕೆ ಮೂಡಬೇಕಿದೆ...

ಕೃಷಿಯಲ್ಲಿ ಗಂಜಲದ ಬಳಕೆ ಹೊಸದೇನಲ್ಲ. ಇದು ಬಹುತೇಕರಿಗೆ ತಿಳಿದ ವಿಷಯ. ಹೀಗಿದ್ದರೂ ನಮ್ಮಲ್ಲಿ ಗಂಜಲ ವ್ಯರ್ಥವಾಗುವುದೇ ಹೆಚ್ಚು. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಗಂಜಲವನ್ನು ಪ್ರತಿ ನಿತ್ಯ ಚರಂಡಿಗೆ ಚೆಲ್ಲಲಾಗುತ್ತಿದೆ.

ದೇಸೀ ಹಸುವಿನ ಗಂಜಲಕ್ಕೆ ಸಿಮೀತವಾಗದೇ ಎಲ್ಲಾ ಬಗೆಯ ಜಾನುವಾರುಗಳ ಗಂಜಲದ ಬಳಕೆ ಅನಿವಾರ್ಯ. ದೇಸೀ ಹಸುವಿನ ಗಂಜಲ ಬಹಳ ಒಳ್ಳೆಯದು, ಇದ್ದರೆ ಖಂಡಿತ ಬಳಸಿ. ಸಾಕಲು ಮತ್ತು ಖರೀದಿಸಲು ಶಕ್ತರಾದವರು ದೇಸೀ ಹಸುಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಿ.

ಇಲ್ಲವಾದರೆ ಇತರೆ ರಾಸುಗಳ ಗಂಜಲವನ್ನು ಸಂಗ್ರಹಿಸಿ. 25 ಎಕರೆಗೆ ಬೇಕಾಗುವಷ್ಟು ಪೋಷಕಾಂಶವನ್ನು ಕೇವಲ ಒಂದು ಹಸುವಿನಿಂದ ಪಡೆಯಬಹುದು ಎಂಬ ನೈಸರ್ಗಿಕ ಕೃಷಿಕ ಸುಭಾಷ್ ಪಾಳೇಕಾರ್ ಅವರ ಮಾತು ಅಕ್ಷರಶಃ ಸತ್ಯ.

ಗಂಜಲದಲ್ಲಿ ದೊಡ್ಡ ಪ್ರಮಾಣದ ಯೂರಿಕ್ ಆಮ್ಲ ಇದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕೃತಕ ಯೂರಿಯಾ ಗೊಬ್ಬರ ಬಳಸುವುದಕ್ಕಿಂತ ಗಂಜಲ ಬಳಸುವುದು ಅತಿ ಸೂಕ್ತ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಕುರಿ ಮಂದೆಗಳನ್ನು ಹೊಲದಲ್ಲಿ ನಿಲ್ಲಿಸಿಕೊಂಡಿರುತ್ತಾರೆ. ಆದರೆ ಮನೆಯಲ್ಲಿ ಸಿಗುವ ಗಂಜಲವನ್ನು ಚರಂಡಿ ಪಾಲು ಮಾಡುತ್ತಾರೆ.

ಪಂಚಗವ್ಯ, ಬೀಜಾಮೃತ, ಜೀವಾಮೃತ, ತ್ರಿಮೂರ್ತಿ ಟಾನಿಕ್ ಹಾಗೂ ಪೂಂಚಿಮರಂದು ತಯಾರಿಕೆಯಲ್ಲಿ ಗಂಜಲ ಒಂದು ಪ್ರಮುಖ ಅಂಶ. ಸಾವಯವ ಕೃಷಿಯಲ್ಲಿ ಜೀವಾಮೃತ ಹಾಗೂ ಪಂಚಗವ್ಯದ ಬಳಕೆ ಹೆಚ್ಚಾಗಿದೆ. ಗಂಜಲ ಕೃಷಿಗೆ ಸೀಮಿತವಾಗದೇ ಮಾನವರ ಆರೋಗ್ಯ ಕಾಪಾಡುವಲ್ಲೂ ಪ್ರಮುಖ ಪಾತ್ರ ವಹಿಸಿದೆ. ಹಸುವಿನ ಗಂಜಲ ‘ಆರ್ಕ’ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆಯಲ್ಲಿದೆ.

ಔಷಧೀಯ ಗುಣಗಳು: ಗಂಜಲದಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ಜೀವಚೈತನ್ಯ ನೀಡುವ ಕಿಣ್ವಗಳು ಹಾಗೂ ಜೀವಸತ್ವಗಳು ಇವೆ. ಗಂಜಲದಲ್ಲಿ ಶೇಕಡ 95ರಷ್ಟು ನೀರು, ಶೇಕಡ 2.5ರಷ್ಟು ಯೂರಿಯಾ ಹಾಗೂ ಶೇಕಡ 2.5ರಷ್ಟು ಸತ್ವ, ಕಿಣ್ವ, ಉಪ್ಪು, ಖನಿಜಗಳು ಇವೆ. 

ಸಾರಜನಕದ ಅಂಶ ಪ್ರತಿ ಲೀಟರ್ ಗಂಜಲದಲ್ಲಿ 6.8 - 21.6 ಗ್ರಾಂ ಇದೆ. ನಿಯಮಿತವಾಗಿ ಗಂಜಲವನ್ನು ಬೆಳೆಗಳಿಗೆ ಬಳಸಿದರೆ ಕಡಿಮೆ ಖರ್ಚಿನೊಂದಿಗೆ, ಅಧಿಕ ಇಳುವರಿ ಪಡೆಯಬಹುದು. ಆಧುನಿಕ ಕೃಷಿ ವ್ಯವಸ್ಥೆ ಅಡಿಯಲ್ಲಿ ಇದರ  ಮಹತ್ವ ಸಂಪೂರ್ಣ ತಿರಸ್ಕಾರಗೊಂಡಿದೆ. ಆಧುನಿಕ ಕೃಷಿ ಉತ್ಪನ್ನಗಳಾದ ರಾಸಾಯನಿಕ ಗೊಬ್ಬರಗಳು, ಪೀಡೆನಾಶಕಗಳು ಹಾಗೂ ಕಳೆನಾಶಕಗಳು ಲಗ್ಗೆ ಇಟ್ಟವು.

ಗಂಜಲ ಕೇವಲ ಪೋಷಕಾಂಶ ಅಲ್ಲ; ಬದಲಾಗಿ ಶೀಲಿಂಧ್ರನಾಶಕ, ಕಳೆನಾಶಕವಾಗಿ ಕೆಲಸ ಮಾಡುತ್ತದೆ. ನಾಚಿಕೆಮುಳ್ಳು ನಿಯಂತ್ರಿಸಲು ಗಂಜಲ ಬಳಸುತ್ತಾರೆ.  ಜ್ವರ ಗುಣಪಡಿಸಲು ಗಂಜಲದೊಂದಿಗೆ ಕಾಳುಮೆಣಸು, ಮೊಸರು ಹಾಗೂ ತುಪ್ಪ ಬೆರೆಸಿ ಕೊಡುತ್ತಾರೆ.

ರಕ್ತಹೀನತೆ ಹೋಗಲಾಡಿಸಲು ಗಂಜಲ, ತ್ರಿಫಲ ಚೂರ್ಣ, ಹಸುವಿನ ಹಾಲಿನೊಂದಿಗೆ ಮಿಶ್ರಣ ಮಾಡಿ ಕೊಡುತ್ತಾರೆ. ಕುಷ್ಠರೋಗ ತಡೆಗಟ್ಟಲು ಗಂಜಲ, ವಾಸಕ ಎಲೆ, ಕುರೇಲ್ಲಾ ಚಕ್ಕೆಯೊಂದಿಗೆ ಬೆರೆಸಿ ಕೊಡುತ್ತಾರೆ.    

ರೈತರ ಅನುಭವದ ಮಾತು
ಎತ್ತಿನ ಗಂಜಲದಿಂದ ಜೋಳಕ್ಕೆ ಬರುವ ಕಾಡಿಗೆ ರೋಗವನ್ನು ನಿಯಂತ್ರಿಸಬಹುದು. ಜೋಳದ ಕಾಳಿಗೆ ಕಾಡಿಗೆ ತಾಗಿದರೆ ತಿನ್ನಲಿಕ್ಕೆ ಬರುವುದಿಲ್ಲ. ಬಿತ್ತನೆ ಬೀಜಗಳನ್ನು ಎತ್ತಿನ ಗಂಜಲದಲ್ಲಿ 2 ನಿಮಿಷ ನೆನೆಸಿ ಕೂಡಲೇ ನೆರಳಲ್ಲಿ ಒಣಗಿಸಬೇಕು. ಆನಂತರ ಆ ಬೀಜಗಳನ್ನು ಬಿತ್ತಬೇಕು ಎಂಬುದು ನವಲಗುಂದದ ರೈತ ಭೀಮರೆಡ್ಡಿ ಅನುಭವದ ಮಾತು.

ಗಂಜಲದೊಂದಿಗೆ ಸೆಗಣಿ ಮಿಶ್ರಣ ಮಾಡಿ ಹತ್ತಿ ಎಲೆಗೆ ಸಿಂಪರಣೆ ಮಾಡಿದರೆ ಸಂಪೂರ್ಣವಾಗಿ ಹತ್ತಿ ಎಲೆ ಸುರಳಿಪೂಚಿ ರೋಗವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಶಿಗ್ಗಾಂವನ ಕಂಕಣವಾಡ ಗ್ರಾಮದ ಸಿ.ಡಿ ಪಾಟೀಲ್.

ಗೋಧಿ ಹೊಲದಲ್ಲಿ ಕಾಡುವ ಗೆದ್ದಲಿನ ಕಾಟಕ್ಕೆ ಕತ್ತೆಯ ಗಂಜಲ ಉತ್ತಮ. ಗೋಧಿ ಬಿತ್ತನೆ ಬೀಜಗಳನ್ನು ಬಿತ್ತನೆಗೆ ಮೊದಲು ಕತ್ತೆಯ ಗಂಜಲದಲ್ಲಿ ನೆನೆಸಬೇಕು. ಬಿತ್ತನೆ ಬೀಜಗಳನ್ನು ಕತ್ತೆ ಗಂಜಲದಲ್ಲಿ ಎರಡು ನಿಮಿಷ ನೆನೆಸಿ ಕೂಡಲೇ ನೆರಳಲ್ಲಿ ಒಣಗಿಸಬೇಕು. ನಂತರ ಆ ಬೀಜಗಳನ್ನು ಬಿತ್ತಬೇಕು ಎನ್ನುವುದು ಗುಜರಾತಿನ ಸಬರಕಾಂತ ಜಿಲ್ಲೆಯ ಚದರಾನಿ ಗ್ರಾಮದ ಧನಬಾಯಿ ಕೀಮಾಭಾಯಿ ಅನುಭವದ ಮಾತು.

ಯಾವುದೇ ಬೀಜವನ್ನು ಎಮ್ಮೆಯ ಗಂಜಲದಲ್ಲಿ ಎರಡು ನಿಮಿಷ ನೆನೆಸಿ ಕೂಡಲೇ ನೆರಳಲ್ಲಿ ಒಣಗಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬೀಜವನ್ನು ಬಿತ್ತಿದರೆ ಅದು ಶಕ್ತಿಭರಿತವಾಗಿ ಬೇಗನೆ ಮೊಳಕೆ ಬರುವುದು.

ಉತ್ತರಾಖಂಡ ರಾಜ್ಯದಲ್ಲಿ ಕೆಲ ವಿಜ್ಞಾನಿಗಳು ಸಂಶೋಧನೆಯಲ್ಲಿ ಅಚ್ಚರಿಯ ವಿಷಯವನ್ನು ಕಂಡುಕೊಂಡಿದ್ದಾರೆ. ಗಂಜಲದ ಮೂಲಕ ಜೇನುಹುಳು ಗೂಡು ಹಾನಿ ಮಾಡುವ ‘ಯುರೋಪಿನ್ ಬ್ರೂಡ್’ ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಹೇಳಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT