ಲಂಡನ್ (ಪಿಟಿಐ): ಗಲ್ಲುಶಿಕ್ಷೆ ಮೇಲಿನ ನಿಷೇಧವನ್ನು ಹಿಂದಕ್ಕೆ ತೆಗೆದುಕೊಂಡಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ನಿರ್ಧಾರವನ್ನು ಖಂಡಿಸಿರುವ ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಟರ್ನ್ಯಾಷನಲ್, ಪಾಕ್ ಸರ್ಕಾರ ಪೆಶಾವರ ಶಾಲಾ ದುರಂತಕ್ಕೆ ಗಲ್ಲುಶಿಕ್ಷೆ ಮೇಲಿನ ನಿಷೇಧ ಹಿಂತೆಗೆತ ಸೂಕ್ತ ಉತ್ತರವಾಗಲಾರದು ಎಂದು ಹೇಳಿದೆ.
‘ಮಂಗಳವಾರ ನಡೆದ ದಾಳಿ ಖಂಡನಾರ್ಹ. ಈ ದುರಂತಕ್ಕೆ ಬಲಿಯಾದವರಿಗೆ ನ್ಯಾಯ ದೊರಕಿಸುವುದು ಅತ್ಯಗತ್ಯ. ಆದರೆ ಗಲ್ಲುಶಿಕ್ಷೆ ಜಾರಿ ಇದಕ್ಕೆ ಎಂದಿಗೂ ಉತ್ತರವಾಗಲಾರದು’ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ನ ಏಷ್ಯಾಪೆಸಿಫಿಕ್ ವಿಭಾಗದ ಉಪ ನಿರ್ದೇಶಕ ಡೇವಿಡ್ ಗ್ರಿಫಿತ್ ಹೇಳಿದ್ದಾರೆ.
‘ದಾಳಿಯ ಕಾರಣ ಪಾಕ್ ಭಯ ಮತ್ತು ಕೋಪಕ್ಕೆ ಒಳಗಾಗಿರುವುದು ಅರ್ಥವಾಗುತ್ತದೆ. ಗಲ್ಲುಶಿಕ್ಷೆ ಮೇಲೆ ಹೇರಿದ್ದ ನಿರ್ಬಂಧ ತೆಗೆಯುವುದು ಅನಾಲೋಚಿತ ಪ್ರತಿಕ್ರಿಯೆಯಾಗುತ್ತದೆಯೇ ಹೊರತು ಮೂಲ ಸಮಸ್ಯೆಗೆ ಪರಿಹಾರ ಒದಗಿಸಲಾರದು’ ಎಂದರು.