ಬೆಂಗಳೂರು: ‘ರಾಜ್ಯ ಸರ್ಕಾರ ಅಭಿವೃದ್ಧಿ ಪಥದತ್ತ ಸಾಗದೆ ಸಂಪೂರ್ಣ ವಿಫಲವಾಗಿ ಗಾಢ ನಿದ್ದೆಯಲ್ಲಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.
ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಎ.ಶಿವಕುಮಾರ್ ಪರವಾಗಿ ಶನಿವಾರ ಕಗ್ಗಲೀಪುರದಲ್ಲಿ ಪ್ರಚಾರ ನಡೆಸಿ ಮತಯಾಚಿಸಿದ ಅವರು ಸಭೆಯಲ್ಲಿ ಮಾತನಾಡಿದರು.
‘ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವ ಕುರಿತು ಶ್ವೇತಪತ್ರ ಹೊರಡಿಸಲಿ’ ಎಂದು ಸವಾಲು ಹಾಕಿದರು.
‘ಈ ಕ್ಷೇತ್ರ ಅಭಿವೃದ್ಧಿ ಆಗಬೇಕಾದರೆ ಈ ಬಾರಿ ಜನರು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಎ.ಶಿವಕುಮಾರ್, ಸೋಮನಹಳ್ಳಿ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಲಕ್ಷ್ಮಿ ಸುರೇಶ್, ದೊಡ್ಡಬೆಲೆ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ವೀಣಾ ನಾಗರಾಜು, ಅಗರ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಸವಿತಾ ಸೋಮಣ್ಣ ಅವರ ಪರವಾಗಿ ಶೋಭಾ ಅವರು ಮತ ಯಾಚಿಸಿದರು.
ಕಗ್ಗಲೀಪುರದಲ್ಲಿ ತಾಲ್ಲೂಕು ಪಂಚಾಯಿತಿ ಜೆಡಿಎಸ್ ಅಭ್ಯರ್ಥಿ ಕೇಶವಮೂರ್ತಿ ಪರವಾಗಿ ಮತ ಯಾಚಿಸಿದರು.