ಜನವಾಡ: ಬೀದರ್ ತಾಲ್ಲೂಕಿನ ಜನವಾಡ ಬಳಿ ನಿರ್ಮಿಸಿರುವ ಭಾಯಿ ಸಾಹೇಬ್ ಸಿಂಗ್ ಗುರುದ್ವಾರದಲ್ಲಿ ಉದ್ಘಾಟನಾ ಸಮಾರಂಭದ ನಿಮಿತ್ತ ಆಯೋಜಿಸಿದ್ದ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಸಂಭ್ರಮದ ನಡುವೆ ಮುಕ್ತಾಯಗೊಂಡವು.
ಪಂಜಾಬ್, ನಾಂದೇಡ್, ನವದೆಹಲಿ ಸೇರಿದಂತೆ ದೇಶದ ವಿವಿಧೆಡೆಯಿಂದ ಬಂದ ಸಿಖ್ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಸಮಾರೋಪ ಸಮಾರಂಭಕ್ಕೆ ಕಳೆ ತಂದುಕೊಟ್ಟರು.
ಪಂಚಪ್ಯಾರೆಗಳಲ್ಲಿ ಐದನೆಯವರಾಗಿದ್ದ ಭಾಯಿ ಸಾಹೇಬ್ ಸಿಂಗ್ ಅವರ ಜನ್ಮಭೂಮಿ ಬೀದರ್ನಲ್ಲಿ ಅವರ ಹೆಸರಿನಲ್ಲಿ ನಿರ್ಮಿಸಿರುವ ಗುರುದ್ವಾರ ಉದ್ಘಾಟನೆ ಆಗಿದ್ದಕ್ಕೆ ಸಂತಪಟ್ಟರು.
ಗುರುದ್ವಾರ ನಿರ್ಮಾಣಕ್ಕೆ ನೆರವು ನೀಡಿರುವ ಸಂತ ಬಾಬಾ ನರೇಂದ್ರ ಸಿಂಗ್ ಹಾಗೂ ಸಂತ ಬಾಬಾ ಬಲವಿಂದರ್ ಸಿಂಗ್ ಮತ್ತು ಬೀದರ್ನ ಗುರುನಾನಕ ಝೀರಾ ಗುರುದ್ವಾರ ಸಮಿತಿಯ ಪದಾಧಿಕಾರಿಗಳು ಭಕ್ತರನ್ನು ಸ್ವಾಗತಿಸಿದರು.
ಅಮೃತಸರದ ಅಕಾಲ ತಖ್ತ ಸಾಹೇಬ್ನ ಜ್ಞಾನಿ ಗುರುಭಜನ್ ಸಿಂಗ್, ಪಂಜಾಬ್ನ ತಲವಂಡಿಯ ತಖ್ತ ದಮ್ ದಮಾ ಸಾಹೇಬ್ನ ಜ್ಞಾನಿ ಗುರುಮುಖ ಸಿಂಗ್, ಆನಂದಪುರದ ತಖ್ತ ಕೇಶಗಾರದ ಜ್ಞಾನಿ ಮಾಲಸಿಂಗ್, ನಾಂದೇಡ್ನ ತಖ್ತ ಹುಜೂರ್ ಸಾಹೇಬ್ನ ಜತಿಂದರ್ ಸಿಂಗ್, ತಖ್ತ ಪಟ್ನಾ ಸಾಹೇಬ್ನ ಜ್ಞಾನಿ ಇಕಬಾಲ್ಸಿಂಗ್, ಗಣ್ಯರಾದ ರಾಮಸಿಂಗ್, ಕಾಶ್ಮೀರಾಸೀಂಗ್, ಬೀದರ್ನ ಗುರುನಾನಕ ಝೀರಾ ಗುರುದ್ವಾರ ಸಮಿತಿಯ ಅಧ್ಯಕ್ಷ ಸರ್ದಾರ್ ಬಲ್ಬೀರ್ ಸಿಂಗ್, ಪ್ರಮುಖರಾದ ದರ್ಬಾರಾಸಿಂಗ್, ಹರಪಾಲಸಿಂಗ್ ಇದ್ದರು.