ರಾಣಿ ಚನ್ನಮ್ಮ ವೇದಿಕೆ(ಕಿತ್ತೂರು): ಕಿತ್ತೂರು ಉತ್ಸವದ ಅಂಗವಾಗಿ ಗುರುವಾರ ರಾತ್ರಿ ಪ್ರವೀಣ ಗೋಡ್ಖಿಂಡಿ ಪ್ರಸ್ತುತ ಪಡಿಸಿದ ಕೊಳಲು ವಾದನಕ್ಕೆ ತಲೆದೂಗಿದ ಪ್ರೇಕ್ಷಕರು ಕರತಾಡನ ಮಾಡಿ, ಶಿಳ್ಳೆ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದರು..
ಸ್ವರಗಳ ಜೊತೆ ಮೈಮರೆತು ಹಾಡಿದ ಕೊಳಲು ಮಾಂತ್ರಿಕನ ಶೈಲಿಗೆ ಮರುಳಾದ ಸಭಿಕರು ಅವರು ನುಡಿಸಿದ ಚಿತ್ರಗೀತೆಗಳನ್ನು ಮೈಮರೆತು ಕೇಳಿ ಆನಂದಿಸಿದರು.
ಯಮನ ರಾಗದಿಂದ ಕಾರ್ಯಕ್ರಮ ಆರಂಭಿಸಿದ ಅವರು ಮಿಶ್ರ ಪಹಾಡಿ ರಾಗ ಪ್ರಸ್ತುತ ಪಡಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
ಇವೆರಡು ರಾಗದೊಂದಿಗೆ ಹಳೇ ಮತ್ತು ಹೊಸ ಚಿತ್ರಗೀತೆಗಳ ಸಂಬಂಧ ವಿವರಿಸಿದ ಅವರು, ಅವುಗಳನ್ನೂ ನುಡಿಸಿ ಪ್ರೇಕ್ಷಕರನ್ನು ಗಂಧರ್ವಲೋಕಕ್ಕೆ ಕರೆದುಕೊಂಡು ಹೋದರು.
ಮಿಶ್ರಪಹಾಡಿಯಾ ರಾಗದ ಜನಪ್ರಿಯ ಚಿತ್ರಗೀತೆಗಳಾದ ಮೂಡಲ ಮನೆಯಾ ಮುತ್ತಿನ ಹನಿಯಾ.., ದೋಣಿ ಸಾಗಲಿ ಮುಂದೆ ಹೋಗಲಿ... ಹಳೇ ಕಾಲದ ಗೀತೆಗಳನ್ನು ನುಡಿಸಿದರು.
ಸ್ವರ ಒಂದೇ ಆದರೂ ಅವು ಸ್ಫುರಿಸುವ ಭಾವ ಬೇರೆಯಾಗಿರುತ್ತದೆ. ಬೇರೆ, ಬೇರೆ ಗೀತೆಗಳು ಈ ರಾಗದೊಂದಿಗೆ ಮೂಡಿ ಬಂದಿವೆ ಎಂದು ನುಡಿದರು.
ಇದಕ್ಕೂ ಮೊದಲು ಎಸ್. ಬಾಲೇಶ್ ಶಹನಾಯಿ ವಾದನ ಪ್ರಸ್ತುತ ಪಡಿಸಿದರು. ಹಾಸ್ಯ ಕಲಾವಿದರಾದ ಮಹಾದೇವ ಸತ್ತಿಗೇರಿ, ರವಿ ಭಜಂತ್ರಿ ಮತ್ತು ಇಂದುಮತಿ ಸಾಲಿಮಠ ಅವರ ಹಾಸ್ಯ ಕಾರ್ಯಕ್ರಮವನ್ನು ಪ್ರೇಕ್ಷಕರು ಆನಂದಿಸಿದರು.