ನವದೆಹಲಿ(ಪಿಟಿಐ): ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣದ ಖಾತೆ ಹೊಂದಿರುವ ಅನುಮಾನಕ್ಕೆ ಗುರಿಯಾದವರು ಯಾರೇ ಆಗಿದ್ದರೂ ತನಿಖೆಗೆ ಒಳಪಡಿಸುವ ಜತೆಗೆ ಅಂತಹ ಖಾತೆದಾರರ ಗೋಪ್ಯತೆಯನ್ನೂ ಕಾಯ್ದುಕೊಳ್ಳಲಾಗುವುದು ಎಂದು ಈ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಸ್ಪಷ್ಟಪಡಿಸಿದೆ.
ಅಲ್ಲದೇ ಈ ಕುರಿತ ತನಿಖೆಯ ವಸ್ತುಸ್ಥಿತಿ ವರದಿಯನ್ನು ಡಿಸೆಂಬರ್ ಮೊದಲ ವಾರದೊಳಗೆ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗುವುದು ಎಂದೂ ಎಸ್ಐಟಿ ಮುಖ್ಯಸ್ಥ ನ್ಯಾಯಮೂರ್ತಿ ಎಂ. ಬಿ. ಷಾ ಹೇಳಿದ್ದಾರೆ. ‘ಸ್ವಿಟ್ಜರ್ಲೆಂಡ್ನ ಜಿನೀವಾ ಎಚ್ಎಸ್ಬಿಸಿ ಬ್ಯಾಂಕಿನಲ್ಲಿ ಖಾತೆದಾರರಾಗಿರುವ ೬೨೭ ಜನರ ಪಟ್ಟಿಯನ್ನು ಸರ್ಕಾರವು ಸುಪ್ರೀಂಕೋರ್ಟ್ಗೆ ಸಲ್ಲಿಸಿದೆ. ಆದರೆ ನಾವು ಇನ್ನೂ ಹೆಚ್ಚಿನ ಖಾತೆದಾರರ ಹೆಸರುಗಳನ್ನು ಕಲೆಹಾಕುತ್ತಿದ್ದೇವೆ’ ಎಂದು ಎಸ್ಐಟಿ ಉಪಾಧ್ಯಕ್ಷ ಅರಿಜಿತ್ ಪಸಾಯತ್ ಗುರುವಾರ ತಿಳಿಸಿದರು.
‘ನಮಗೆ ಯಾರೂ ದೊಡ್ಡವರೂ ಅಲ್ಲ, ಯಾರೂ ಸಣ್ಣವರೂ ಅಲ್ಲ; ಎಲ್ಲರೂ ಒಂದೇ. ಈ ದೇಶವನ್ನು ಲೂಟಿ ಹೊಡೆದವರನ್ನು ಹಿಡಿದು ದಂಡ ವಿಧಿಸುವ ಜತೆಗೆ ಇನ್ನಿತರ ಶಿಕ್ಷೆಯನ್ನು ವಿಧಿಸಲಾಗುವುದು ಎಂಬ ಮಾತನ್ನು ನಾವು ಕೊಡುತ್ತೇವೆ. ಬಹಳಷ್ಟು ಮಂದಿಗೆ ಕಿರಿಕಿರಿ ಆಗುವಂತಹ ಕೆಲಸ ಮಾಡುವುದಕ್ಕೆ ನಾವಿಬ್ಬರೂ (ಎಸ್ಐಟಿ ಮುಖ್ಯಸ್ಥರಾದ ನ್ಯಾಯಮೂರ್ತಿ ಎಂ.ಬಿ.ಷಾ ಮತ್ತು ನಾನು) ಹೆಸರಾದವರು’ ಎಂದು ಸುದ್ದಿವಾಹಿನಿಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅವರು ಹೇಳಿದರು.
ನ್ಯಾಯಮೂರ್ತಿ ಷಾ ಅವರು ಮಾತನಾಡಿ, ‘ಗೋಪ್ಯತೆ ಕಾಯ್ದುಕೊಳ್ಳುವಿಕೆಯು ಜಾಗತಿಕ ಒಪ್ಪಂದವಾಗಿದೆ. ಈ ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸಲಾಗದು. ಒಂದೊಮ್ಮೆ ಉಲ್ಲಂಘಿಸಿದರೆ ಅನ್ಯದೇಶಗಳು ಮುಂದೆ ಭಾರತದೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳುವುದಿಲ್ಲ. ನಾವು ಇಂತಹ ಖಾತೆದಾರರ ಗೋಪ್ಯ ವಿವರಗಳನ್ನು ಬಹಿರಂಗಪಡಿಸಿದರೂ ಅದನ್ನು ಸಂಬಂಧಪಟ್ಟ ವಿದೇಶವು ದೃಢೀಕರಿಸುವುದು ಅತ್ಯಗತ್ಯ. ಪಟ್ಟಿಯಲ್ಲಿರುವ ವ್ಯಕ್ತಿ ತನ್ನಲ್ಲಿ ಖಾತೆದಾರ ಎಂಬುದಕ್ಕೆ ವಿದೇಶದಲ್ಲಿ ಸಾಕ್ಷ್ಯ ಇರುತ್ತದೆ. ಆದರೆ ಆ ಸಾಕ್ಷ್ಯ ನಮಗೆ ಸಿಗುವುದಿಲ್ಲ’ ಎಂದರು.
ವಿದೇಶಿ ಬ್ಯಾಂಕುಗಳ ಖಾತೆದಾರರ ಹೆಸರು ಬಹಿರಂಗಗೊಳಿಸಿದರೆ ಅನ್ಯದೇಶಗಳ ಜತೆಗಿನ ಒಪ್ಪಂದದ ಗೋಪ್ಯತೆಯ ಕರಾರನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸರ್ಕಾರ ಬುಧವಾರ ಸುಪ್ರೀಂಕೋರ್ಟ್ನಲ್ಲಿ ಭೀತಿ ವ್ಯಕ್ತಪಡಿಸಿತ್ತು. ಆಗ ಸುಪ್ರೀಂಕೋರ್ಟ್ ‘ಈ ಸಂಬಂಧ ನಿಮ್ಮದು ಏನೇ ಅಹವಾಲು ಇದ್ದರೂ ಅದನ್ನು ಎಸ್ಐಟಿ ಮುಂದೆ ಹೇಳಿಕೊಳ್ಳಿ’ ಎಂದಿತ್ತು. ಈಗ ಸುಪ್ರೀಂಕೋರ್ಟ್ ರಚಿಸಿರುವ ಎಸ್ಐಟಿ ಗೋಪ್ಯತೆ ಕಾಯ್ದುಕೊಳ್ಳುವುದರಿಂದ ಸರ್ಕಾರ ಸಮಾಧಾನದ ನಿಟ್ಟುಸಿರುಬಿಟ್ಟಿದೆ.
ಕಪ್ಪುಹಣ ಖಾತೆದಾರರನ್ನು ನಿಗದಿತ ಸಮಯದೊಳಗೆ ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು. ತನಿಖೆಗೆ ವೇಗ ನೀಡುವ ಸಲುವಾಗಿ ಎಸ್ಐಟಿ ಇತರ ಸಂಸ್ಥೆಗಳೊಂದಿಗೆ ಅಂಕಿ ಅಂಶಗಳನ್ನು ಕೂಡ ಹಂಚಿಕೊಳ್ಳುತ್ತಿದೆ ಎಂದರು. ‘ಸರ್ಕಾರ ೬೨೭ ಹೆಸರುಗಳ ಪಟ್ಟಿ ನೀಡಿದೆ. ಜತೆಗೆ ನಾವು ಇತರರ ಹೆಸರುಗಳನ್ನೂ ಕಲೆ ಹಾಕುತ್ತಿದ್ದೇವೆ. ಇವೆಲ್ಲವುಗಳ ತನಿಖೆಯ ವರದಿಯು ವಿಸ್ತೃತವಾಗಿರಲಿದೆ’ ಎಂದ ಷಾ, ‘ಸರ್ಕಾರದ ಪಟ್ಟಿಯಲ್ಲಿರದ ಹೆಸರುಗಳ ಬಗೆಗೂ ತನಿಖೆ ನಡೆಸುತ್ತೇವೆ’ ಎಂದರು.
‘ಕಪ್ಪುಹಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ನಾವು ನಿರ್ದಿಷ್ಟವಾದ ಮಾಹಿತಿಗಳನ್ನು ನಿರೀಕ್ಷಿಸುತ್ತೇವೆ. ಯಾವುದೇ ಅನುಮಾನದ ಪ್ರಕರಣಗಳ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಲು ಕೋರಿ ಜಾಹೀರಾತು ಫಲಕಗಳನ್ನು ಹಾಕುತ್ತೇವೆ’ ಎಂದು ಪಸಾಯತ್ ಹೇಳಿದರು. ಕೆಲವು ರಾಜ್ಯಗಳಲ್ಲಿ ಕೆಲವು ಕಂಪೆನಿಗಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪವಿದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.
‘ಮಾಹಿತಿ ಬಹಿರಂಗ ಬೇಡ’
ನವದೆಹಲಿ/ ಬರ್ನ್: ಸ್ವಿಟ್ಜರ್ಲೆಂಡ್– ಭಾರತ ತೆರಿಗೆ ಒಪ್ಪಂದದ ಅನ್ವಯ ಕಪ್ಪುಹಣಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಯಾವುದೇ ಮಾಹಿತಿಯನ್ನು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ‘ನಿರ್ದಿಷ್ಟ ಮತ್ತು ಸೂಕ್ತ’ ಕಾರಣಕ್ಕೆ ಮಾತ್ರ ಬಹಿರಂಗಪಡಿಸಬಹುದು. ಅದನ್ನು ಹೊರತುಪಡಿಸಿ ಬೇರ್್ಯಾವುದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಕೂಡ ಬಹಿರಂಗಗೊಳಿಸಬಾರದು ಎಂದು ಸ್ವಿಟ್ಜರ್ಲೆಂಡ್ ಗುರುವಾರ ಸ್ಪಷ್ಟಪಡಿಸಿದೆ.
ಧೈರ್ಯವಿದ್ದರೆ ಬಹಿರಂಗಪಡಿಸಿ
ಕೇಂದ್ರ ಸರ್ಕಾರಕ್ಕೆ ತುಸುವಾದರೂ ಧೈರ್ಯವಿದ್ದರೆ ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಕಪ್ಪುಹಣವಿಟ್ಟ ಎಲ್ಲ ಭಾರತೀಯ ಖಾತೆದಾರರ ಹೆಸರುಗಳನ್ನು ಬಹಿರಂಗಪಡಿಸಲಿ. ಆಯ್ದ ಕೆಲವು ಹೆಸರು ಬಹಿರಂಗಪಡಿಸಿದರೆ ಸಾಲದು. ದೇಶದ ಜನತೆಗೆ ಸಂಪೂರ್ಣ ಮಾಹಿತಿ ನೀಡಿ.
– ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಆರು ತಿಂಗಳಾಗಿದೆ
ವಿದೇಶಿ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದವರ ಹೆಸರು ಬಹಿರಂಗಪಡಿಸುವಂತೆ ಗದ್ದಲ ಮಾಡುತ್ತಿರುವ ಕಾಂಗ್ರೆಸ್ನವರು ಆ ಕೆಲಸ ಅಷ್ಟು ಸುಲಭವಾಗಿದ್ದರೆ ಕಳೆದ 50 ವರ್ಷಗಳಿಂದ ಏನು ಮಾಡುತ್ತಿದ್ದರು? ನಾವಿನ್ನೂ ಅಧಿಕಾರಕ್ಕೆ ಬಂದು ಆರು ತಿಂಗಳು ಆಗಿದೆ. ಖಂಡಿತ ಹೆಸರು ಬಹಿರಂಗಪಡಿಸುತ್ತೇವೆ. ಅದರ ಬಿಸಿ ಕಾಂಗ್ರೆಸ್ಗೆ ತಾಗುತ್ತದೆ.
– ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.