ನವದೆಹಲಿ (ಪಿಟಿಐ): ತಪ್ಪಿತಸ್ಥರು ‘ದೊಡ್ಡವರಿರಲಿ ಅಥವಾ ಚಿಕ್ಕವರಿರಲಿ’ ಅವರ ವಿರುದ್ಧ ತನಿಖೆ ನಡೆಸಿ, ಸುಪ್ರೀಂ ಕೋರ್ಟ್ ನೀಡಿರುವ ಗಡುವಿನೊಳಗೆ ವರದಿ ಸಲ್ಲಿಸುವುದಾಗಿ ಕಪ್ಪುಹಣ ಪ್ರಕರಣಗಳ ತನಿಖೆಗೆ ಸರ್ವೋಚ್ಛ ನ್ಯಾಯಾಲಯ ನೇಮಿಸಿರುವ ವಿಶೇಷ ತನಿಖಾ ತಂಡ ಗುರುವಾರ ತಿಳಿಸಿದೆ.
ಅಲ್ಲದೇ, ವಿದೇಶದಲ್ಲಿ ಕಪ್ಪುಹಣ ಇಟ್ಟಿರುವ ಖಾತೆದಾರರ ಗೌಪ್ಯತೆಯನ್ನು ಉಲ್ಲಂಘಿಸುವುದಿಲ್ಲ ಎಂದು ಎಸ್ಐಟಿ ಅಧ್ಯಕ್ಷ ಎಂ.ಬಿ.ಷಾ ಹಾಗೂ ಉಪಾಧ್ಯಕ್ಷ ಅರಿಜಿತ್ ಪಸಯಾತ್ ಸ್ಪಷ್ಟ ಪಡಿಸಿದ್ದಾರೆ.
ಷಾ ಹಾಗೂ ಪಸಯಾತ್ ಅವರು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳು.
‘ನಮ್ಮೆದೆರು ಯಾರೂ ದೊಡ್ಡರಲ್ಲ.ಯಾರೂ ಚಿಕ್ಕವರಲ್ಲ. ಎಲ್ಲರೂ ಸಮಾನರು. ಆರ್ಥಿಕವಾಗಿ ಮತ್ತು ಇತರ ಯಾವುದೆ ವಿಧದಲ್ಲಿ ರಾಷ್ಟ್ರವನ್ನು ದೋಚಿದವರನ್ನು ಹಿಡಿಯಲಾಗುವುದು. ಅವರನ್ನು ಶಿಕ್ಷಿಸಲಾಗುವುದು’ ಎಂದು ಎಸ್ಐಟಿ ಉಪಾಧ್ಯಕ್ಷರಾದ ನ್ಯಾಯಮೂರ್ತಿ ಪಸಯತ್ ಅವರು ತಿಳಿಸಿದ್ದಾರೆ.
ಈವರೆಗೂ ದೇಶದ ದೊಡ್ಡ ವ್ಯಕ್ತಿಗಳ ವಿರುದ್ಧದ ಸಾಕಷ್ಟು ಪ್ರಕರಣಗಳನ್ನು ನಿಗದಿಪಡಿಸಿರುವುದಾಗಿ ನ್ಯಾಯಮೂರ್ತಿ ಷಾ ಅವರು ತಿಳಿಸಿದ್ದಾರೆ.
‘ನಮಗೆ ಯಾವ ದೊಡ್ಡಣ್ಣನೂ ಇಲ್ಲ. ಅವರನ್ನು ನಾವು ದೇಶದ ಬಡ ವ್ಯಕ್ತಿಯ ಸಮಾನವಾಗಿ ಸತ್ಕರಿಸುತ್ತೇವೆ’ ಎಂದು ಮಾಧ್ಯಮಗಳಿಗೆ ಅವರು ತಿಳಿಸಿದ್ದಾರೆ.
ಇದೇ ವೇಳೆ, ‘ಗೌಪ್ಯತೆ ಅಂತರರಾಷ್ಟ್ರೀಯ ಒಪ್ಪಂದವಾಗಿದ್ದು, ನೀವು ಅದನ್ನು ಉಲ್ಲಂಘಿಸಲಾಗದು. ಒಂದು ವೇಳೆ ಉಲ್ಲಂಘಿಸಿದರೆ ಅವರು ಮುಂದೆ ಮಾಹಿತಿ ನೀಡದಿರಬಹುದು. ಈ ವಿಷಯದಲ್ಲಿ ಬೇರೆ ರಾಷ್ಟ್ರದಿಂದ ಖಚಿತತೆ ಅಗತ್ಯ. ಒಬ್ಬ ವ್ಯಕ್ತಿ ಖಾತೆ ಹೊಂದಿರವ ಬಗ್ಗೆ ಅಲ್ಲೊಂದು ಪುರಾವೆ ಇರುತ್ತದೆ. ಆದರೆ ಆ ಪುರಾವೆಯನ್ನು ನೀವು ಪಡೆಯಲಾಗದು’ ಎಂದು ಎಸ್ಐಟಿ ಅಧ್ಯಕ್ಷ ಷಾ ತಿಳಿಸಿದ್ದಾರೆ.
ಅಲ್ಲದೇ, ‘ಕಪ್ಪುಹಣ ಯಾವಾಗ ಹಿಂದಿರುಗಿ ತರುವೆವು ಎಂದು ಹೇಳುವುದು ನನಗೆ ಕಷ್ಟ. ಆದರೆ ತನಿಖೆ ವೇಗವಾಗಿ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿರುವ ಗಡುವಿನೊಳಗೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಲಾಗುವುದು. ಡಿಸೆಂಬರ್ 3ರ ವೇಳೆಗೆ ಕಪ್ಪುಹಣದ ಪ್ರಕರಣದ ಎರಡನೇ ವರದಿಯನ್ನು ಸಲ್ಲಿಸಲಾಗುವುದು ಎಂದು ಎಸ್ಐಟಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.