ಚನ್ನರಾಯಪಟ್ಟಣ: ಶ್ರವಣಬೆಳಗೊಳದಲ್ಲಿ ನಡೆಯಲಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿವಿಧ ಗ್ರಾಮಗಳ ಗ್ರಾಮಸ್ಥರು ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಸೋಮವಾರ 9,700 ತೆಂಗಿನಕಾಯಿ ದೇಣಿಗೆ ನೀಡಿದರು.
ಕಾಂತರಾಜಪುರ ಗ್ರಾಮಸ್ಥರು 6,800 ತೆಂಗಿನಕಾಯಿ ಹಾಗೂ 400 ಕೊಬ್ಬರಿ, ಸುಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ 2 ಸಾವಿರ ತೆಂಗಿನಕಾಯಿ ಹಾಗೂ ಜನಿವಾರ ಗ್ರಾಮದ ಕಾಳೇಗೌಡ ಎಂಬುವವರು 500 ತೆಂಗಿನಕಾಯಿ ದೇಣಿಗೆ ನೀಡಿದರು.
ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಗ್ರಾಮಸ್ಥರು ಸದ್ಭಾವನೆಯಿಂದ ನೀಡುತ್ತಿರುವ ದೇಣಿಗೆ ಸಮ್ಮೇಳನದ ಯಶಸ್ಸಿನ ದಿಕ್ಸೂಚಿ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಗ್ರಾಮಸ್ಥರು ನೀಡುತ್ತಿರುವ ತೆಂಗಿನಕಾಯಿ, ಕೊಬ್ಬರಿಯಿಂದ ಡುಗೆ, ಉಪಾಹಾರ ತಯಾರಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ವಿಜಯಾ, ತಹಶೀಲ್ದಾರ್ ಕೆ. ಕೃಷ್ಣ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಲ್. ಶ್ರೀಧರ್, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಎಚ್.ಎನ್. ಲೋಕೇಶ್, ಎಸ್.ಆರ್. ಲೋಕೇಶ್, ಎಸ್.ಎಂ. ಲಕ್ಷ್ಮಣ್ ಹಾಜರಿದ್ದರು.