ನವದೆಹಲಿ(ಪಿಟಿಐ): ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ದಟ್ಟ ಮಂಜು ಕವಿದಿರುವ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರ ಪ್ರದೇಶದಲ್ಲಿ ಮೂವರು ಸೇರಿದಂತೆ ನಾಲ್ವರು ಚಳಿಯಿಂದ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಸುಮಾರು 173 ವಿಮಾನಗಳು ಮತ್ತು 70 ರೈಲುಗಳ ಸಂಚಾರ ಅಡಚಣೆಯಾಗಿದೆ.
ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ತಾನ, ಉತ್ತರಾಖಂಡ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಒಡಿಶಾ ಹಾಗೂ ದಕ್ಷಿಣದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಸೋಮವಾರ ಮುಂಜಾನೆ ದೆಹಲಿಯಲ್ಲಿ ದಟ್ಟ ಮಂಜು ಆವರಿಸಿತ್ತು. ಕಳೆದ ಐದು ವರ್ಷಗಳಲ್ಲಿಯೇ ಅತಿ ಕನಿಷ್ಠ ತಾಪಮಾನ (4.2 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ.
‘ಮಂಜು ಮುಸುಕಿದ ಕಾರಣ ದೆಹಲಿಗೆ ಬರಬೇಕಿದ್ದ ಅನೇಕ ರೈಲುಗಳು ಮೂರರಿಂದ ನಾಲ್ಕು ಗಂಟೆ ತಡವಾಗಿ ಬಂದವು. ಅಂತೆಯೇ ದೆಹಲಿಯಿಂದ ಇತರೆ ಭಾಗಗಳಿಗೆ ಹೊರಡಬೇಕಿದ್ದ ರೈಲುಗಳ ಸಮಯದಲ್ಲಿಯೂ ವ್ಯತ್ಯಾಸವಾಯಿತು. ದಟ್ಟ ಮಂಜಿನ ಕಾರಣ ನಿಧಾನವಾಗಿ ಚಲಿಸುವಂತೆ ಚಾಲಕರಿಗೆ ಸೂಚನೆ ನೀಡಲಾಗಿದೆ’ ಎಂದು ಉತ್ತರ ವಲಯ ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಬೆಳಿಗ್ಗೆ 6 ತಾಸುಗಳ ಕಾಲ ವಿಮಾನಗಳ ಆಗಮನ ಹಾಗೂ ನಿರ್ಗಮನದಲ್ಲಿ ವ್ಯತ್ಯಯವಾಯಿತು.
ಜೈಪುರ ವರದಿ: ರಾಜಸ್ತಾನದಲ್ಲಿಯೂ ಶೀತದ ವಾತಾವರಣ ಮುಂದುವರಿದಿದೆ. ಮೌಂಟ್ ಅಬುನಲ್ಲಿ ಕನಿಷ್ಠ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಶೀತಗಾಳಿ ಆವರಿಸಿದೆ. ಶ್ರೀನಗರದಲ್ಲಿ ಅತಿ ಕಡಿಮೆ 1.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.