ನವದೆಹಲಿ: ಕರ್ನಾಟಕ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಶಾಸಕರ ಖರೀದಿ ಪ್ರಯತ್ನ ಪ್ರಕರಣದಿಂದ ಚುನಾವಣೆ ರದ್ದಾಗುವ ಸಾಧ್ಯತೆ ಹೆಚ್ಚಾಗಿ ಆತಂಕಕ್ಕೆ ಒಳಗಾಗಿದ್ದ ಕಾಂಗ್ರೆಸ್, ಈಗ ಚುನಾವಣಾ ಆಯೋಗದ ಅಧಿಕಾರವನ್ನು ಮೊಟಕು ಗೊಳಿಸಲು ಮುಂದಾಗಿದೆ.
ಚುನಾವಣೆಯನ್ನು ರದ್ದುಪಡಿಸುವ ಅಥವಾ ಮುಂದೂಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಕಾಂಗ್ರೆಸ್ ವಾದಿಸುತ್ತಿದ್ದು, ಕಾಂಗ್ರೆಸ್ನ ಹಿರಿಯ ಮುಖಂಡ ಶಾಂತಾರಾಮ ನಾಯಕ್ ಸಂವಿಧಾನದ ವಿಧಿ 324ಕ್ಕೆ ತಿದ್ದುಪಡಿ ಸೂಚಿಸಿ ಖಾಸಗಿ ಮಸೂದೆಯ ನೋಟಿಸ್ ನೀಡಿದ್ದಾರೆ.
ಸಂವಿಧಾನದ 324ನೇ ವಿಧಿ ಅನ್ವಯ ಚುನಾವಣೆ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುವ ಅಧಿಕಾರವು ಚುನಾವಣಾ ಆಯೋಗಕ್ಕೆ ಇದೆ. ಈ ಅಧಿಕಾರ ಮೊಟಕುಗೊಳಿಸುವುದಕ್ಕೆ ಸಂಬಂಧಿ ಸಿದಂತೆ ನಾಯಕ್ ಅವರು ಖಾಸಗಿ ಮಸೂದೆಯ ನೋಟಿಸನ್ನು ರಾಜ್ಯಸಭಾ ಸಚಿವಾಲಯಕ್ಕೆ ಕಳುಹಿಸಿದ್ದಾರೆ.
ಸಂಸತ್ತಿನ ಮಳೆಗಾದ ಅಧಿವೇಶನದಲ್ಲಿ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಅವರು ಮುಂದಾಗಿದ್ದಾರೆ. ಕೆಲವು ಶಾಸಕರು ಮತ ನೀಡಲು ಹಣದ ಬೇಡಿಕೆ ಇಟ್ಟ ದೃಶ್ಯವನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದನ್ನೇ ಆಧಾರವಾಗಿ ಇಟ್ಟುಕೊಂಡು ಆಯೋಗವು ಚುನಾವಣೆ ಮುಂದೂ ಡುವ ಅಥವಾ ರದ್ದುಪಡಿಸುವ ಬಗ್ಗೆ ಚಿಂತನೆ ನಡೆಸಿತ್ತು. ಇದರಿಂದ ಕಾಂಗ್ರೆಸ್ ಪಕ್ಷವು ತೀವ್ರ ಆತಂಕಕ್ಕೆ ಒಳಗಾಗಿತ್ತು.
ಸಂವಿಧಾನದ ವಿಧಿ 324ಕ್ಕೆ ಇನ್ನೂ ಎರಡು ಉಪ ವಿಧಿಗಳನ್ನು ಸೇರಿಸಿ ಚುನಾವಣೆ ರದ್ದುಪಡಿಸುವ ಅಥವಾ ಮುಂದೂಡುವ ಆಯೋಗದ ಅಧಿಕಾರವನ್ನು ಮೊಟಕುಗೊಳಿಸಲು ಮತ್ತು ಯಾವುದೇ ನ್ಯಾಯಾಲಯವು ಆಯೋಗಕ್ಕೆ ಆದೇಶ ಹೊರಡಿಸಲು ನಿರ್ದೇಶನ ನೀಡುವ ಅಧಿಕಾರ ಹೊಂದಿರುವುದಿಲ್ಲ ಎಂಬ ತಿದ್ದುಪಡಿ ಸೇರಿಸಲು ನಾಯಕ್ ಅವರು ಬಯಸಿದ್ದಾರೆ.