‘ನಾನು ಯಾರಿಗಾಗಿ ಭ್ರಷ್ಟಾಚಾರದಲ್ಲಿ ತೊಡಗಬೇಕು? ನನಗೆ ಹಿಂದು–ಮುಂದು ಯಾರೂ ಇಲ್ಲ. ನನ್ನ ಇಡೀ ದೇಹ, ಹೃದಯವನ್ನು ದೇಶಕ್ಕೆ ಅರ್ಪಿಸಿದ್ದೇನೆ’
–ಬಿಜೆಪಿ ಪ್ರಧಾನಿ ಅಭ್ಯರ್ಥಿ, 63 ವರ್ಷದ ನರೇಂದ್ರ ಮೋದಿ ಈ ವರ್ಷ ಚುನಾವಣಾ ರ್ಯಾಲಿಯೊಂದರಲ್ಲಿ ಮಾಡಿದ ಘೋಷಣೆ ಇದು. ತಾವು ಅವಿವಾಹಿತನಾಗಿರುವುದರಿಂದ ಭ್ರಷ್ಟನಾಗಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಅವರು ಈ ಹೇಳಿಕೆ ನೀಡಿದ್ದರು.
ಆದರೆ, ಕಳೆದ ಬುಧವಾರ ಗುಜರಾತ್ನ ವಡೋದರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರಸಲ್ಲಿಸುವಾಗ ಘೋಷಿಸಿದ್ದ ಪ್ರಮಾಣಪತ್ರದಲ್ಲಿ ಅವರು ತಾವು ‘ವಿವಾಹಿತ’ ಎಂದು ನಮೂದಿಸಿದ್ದಾರೆ. (ಜಶೋದಾಬೆನ್ ಚಮನ್ಲಾಲ್ ಅವರು ತಮ್ಮ ಪತ್ನಿ ಎಂದೂ ಘೋಷಿಸಿಕೊಂಡಿದ್ದಾರೆ)
ಈ ಹಿಂದೆ, ನಾಲ್ಕು ಚುನಾವಣೆಗಳಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಅವರು ವೈವಾಹಿಕ ಸ್ಥಿತಿ ಅಂಕಣವನ್ನು ಖಾಲಿ ಬಿಟ್ಟಿದ್ದರು. 45 ವರ್ಷಗಳ ಹಿಂದೆ ನಡೆದ ಮದುವೆಯ ಬಗ್ಗೆ ಮೋದಿ ಅವರು ಅಧಿಕೃತವಾಗಿ ಒಪ್ಪಿಕೊಂಡಿರುವುದು ಇದೇ ಮೊದಲು.
ಸನ್ಯಾಸಿಯಾಗಲು ಅಥವಾ ಹಿಂದೂ ಸಂಘಟನೆಯೊಂದರ ಪೂರ್ಣಪ್ರಮಾಣದ ಕಾರ್ಯಕರ್ತನಾಗಲು ಬಯಸಿ ಮನೆ ಹಾಗೂ ಪತ್ನಿಯನ್ನು ತೊರೆದಿದ್ದ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ದೇಶದ ರಾಜಕೀಯಲ್ಲಿ ಮುಂಚೂಣಿಗೆ ಬರುತ್ತಿದ್ದಂತೆಯೇ ಅವರ ಮದುವೆಯ ಬಗ್ಗೆ ಮಾಧ್ಯಮಗಳಲ್ಲಿ, ರಾಜಕೀಯ ವಲಯಗಳಲ್ಲಿ ಚರ್ಚೆ ಆರಂಭವಾಯಿತು.
ಆದರೆ, ಈ ಚರ್ಚೆಗಳಿಂದ ದೂರ ಉಳಿಯಲು ಮೋದಿ ಹಾಗೂ ಬಿಜೆಪಿ ಯತ್ನಿಸುತ್ತಲೇ ಬಂದಿವೆ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಜಶೋದಾಬೆನ್ ಅವರನ್ನು ಪತ್ರಕರ್ತರು ಸಂದರ್ಶನ ನಡೆಸಿದ್ದ ಸಂದರ್ಭದಲ್ಲೂ ಮೋದಿ ತುಟಿ ಬಿಚ್ಚಿರಲಿಲ್ಲ. ಅಷ್ಟೇ ಏಕೆ, ಒಂದು ವಾರದಿಂದೀಚೆಗೆ ಮಾಧ್ಯಮಗಳಲ್ಲಿ ಈ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಮೋದಿ ಮೌನ ಮುರಿದಿಲ್ಲ.
ಆದರೆ, ಅವರ ಹಿರಿಯ ಅಣ್ಣ ಸೋಮಭಾಯಿ ದಾಮೋದರದಾಸ್ ಮೋದಿ ಅವರು ಕಳೆದ ಗುರುವಾರ ಪ್ರಕಟಣೆಯೊಂದನ್ನು ನೀಡಿ ‘ಅದೊಂದು ಔಪಚಾರಿಕ ಮದುವೆಯಾಗಿತ್ತು’ ಎಂದು ಹೇಳಿದ್ದಾರೆ.
‘ನರೇಂದ್ರನದ್ದು ತ್ಯಾಗಮಯ ಜೀವನ. ಅದನ್ನು ನಾವು ಒಪ್ಪಿಕೊಳ್ಳಬೇಕು. ಅವನು ಮಾಡಿರುವ ತ್ಯಾಗದ ಬಗ್ಗೆ ಇಡೀ ದೇಶದ ಜನರಿಗೆ ಗೊತ್ತಿದೆ. ಈ ಮದುವೆ 40 ಅಥವಾ 50 ವರ್ಷಗಳ ಹಿಂದೆ ಸಂಪ್ರದಾಯಸ್ಥ, ಬಡ ಕುಟುಂಬಗಳ ಪರಿಸ್ಥಿತಿಯಲ್ಲಿ ನಡೆದಿರುವಂತಹದ್ದು. ಇಡೀ ಪ್ರಸಂಗವನ್ನು ನಾವು ಈ ದೃಷ್ಟಿಯಲ್ಲಿ ನೋಡಬೇಕು’ ಎಂದು ದಾಮೋದರದಾಸ್ ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಅವರು ದೇಶದ ಜನರನ್ನು ವಂಚಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರಾದರೂ, ಈ ವಿವಾದವು ಬಿಜೆಪಿ ಪ್ರಧಾನಿ ಅಭ್ಯರ್ಥಿಯ ವರ್ಚಸ್ಸಿಗೆ ಹಾನಿ ಮಾಡಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಭಾರತದಲ್ಲಿ ಸಾರ್ವಜನಿಕ ಜೀವನದಲ್ಲಿ ತೊಡಗಿರುವವರು ಸಂಸಾರ ತ್ಯಜಿಸುವುದು ರೂಢಿಯಲ್ಲೇ ಬಂದಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಕೂಡ ಮದುವೆಯಾಗಿ ಸಂಸಾರ ತೊರೆದು ಸನ್ಯಾಸಿಯಾಗುವ ಪಣತೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಚುನಾವಣಾ ‘ಸಾಧನ’?: ಅವಿವಾಹಿತರು ಎಂದು ಸಾರ್ವಜನಿಕವಾಗಿ ಬಿಂಬಿಸಿಕೊಂಡಿದ್ದ ಮೋದಿ ಹಾಗೂ ರಾಹುಲ್ ಗಾಂಧಿ ಅವರು ದೇಶದ ಉನ್ನತ ಪಟ್ಟಕ್ಕಾಗಿ ಮುಖಾಮುಖಿಯಾಗಿದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆ ಕಳೆಕಟ್ಟಿತ್ತು.
ಕಳೆದ ವರ್ಷ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ನನಗೆ ಮದುವೆಯಾಗುವ ಯೋಚನೆ ಇಲ್ಲ. ಈಗ ಇರುವಂತೆಯೇ ಇರುತ್ತೇನೆ’ ಎಂದು ಹೇಳುವ ಮೂಲಕ ವಿವಾಹ ವದಂತಿಗೆ ತೆರೆ ಎಳೆದಿದ್ದರು.
ಹಿಂದೂ ಧರ್ಮದ ಪ್ರಕಾರ, ಮನುಷ್ಯನೊಬ್ಬ ತನ್ನ ಜೀವನದಲ್ಲಿ –ಬ್ರಹ್ಮಚರ್ಯ, ಗೃಹಸ್ಥಾಶ್ರಮ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಹಂತಗಳನ್ನು ದಾಟುತ್ತಾನೆ. ಭ್ರಷ್ಟಾಚಾರದ ಕುರಿತಾಗಿ ಜನರಲ್ಲಿರುವ ಕೋಪವನ್ನು ಗ್ರಹಿಸಿರುವ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಇಬ್ಬರು, ಈ ಸಂಪ್ರದಾಯವನ್ನು ‘ಸಾಧನ’ವನ್ನಾಗಿ ಬಳಸುತ್ತಿದ್ದಾರೆ ಎಂದು ಹೇಳುತ್ತಾರೆ ಇತಿಹಾಸ ತಜ್ಞ ರಾಮಚಂದ್ರ ಗುಹಾ.
ಮೋದಿ ಅವರ ಹೊಸ ಜೀವನ ಚರಿತ್ರೆ ಪ್ರಕಾರ, ಹಿಮಾಲಯದಲ್ಲಿ ಸುತ್ತಾಡುವುದಕ್ಕಾಗಿ ಸಂಸಾರ ಬಂಧನ ಕಡಿದುಕೊಂಡು ಮನೆಯನ್ನು ತೊರೆದಾಗ ಮೋದಿ ಅವರಿಗೆ ಕೇವಲ 17 ವರ್ಷ. ಆ ಸಂದರ್ಭದಲ್ಲಿ ಅವರು ಸನ್ಯಾಸಿಯಾಗಲು ಬಯಸಿದ್ದರು.
ಮದುವೆಯಾದ ನಂತರ ಮೋದಿ ಹಾಗೂ ಜಶೋದಾಬೆನ್ ಅವರು ಯಾವತ್ತೂ ಸಹಜೀವನ ನಡೆಸಿಲ್ಲ ಎಂದೂ ಜೀವನಚರಿತ್ರೆ ಹೇಳುತ್ತದೆ.
‘ಸಮಾಜದಿಂದ ಹಾಗೂ ಕುಟುಂಬದಿಂದ ಎಷ್ಟು ಒತ್ತಡ ಬಂದರೂ ತಮಗೆ ಇಷ್ಟ ಇಲ್ಲದ್ದನ್ನು ಮಾಡಲು ನರೇಂದ್ರ ಅವರಿಗೆ ಇಷ್ಟವಿರಲಿಲ್ಲ’ ಎಂದು ಪುಸ್ತಕದಲ್ಲಿ ಹೇಳಲಾಗಿದೆ.
‘ನರೇಂದ್ರ ಅವರ ಪತ್ನಿಯಾಗಿರಲು ಜಶೋದಾಬೆನ್ ಅವರಿಗೆ ಭಾರತೀಯ ಕಾನೂನು ರೀತ್ಯ ಯಾವುದೇ ನಿಬಂಧನೆಗಳಿರಲಿಲ್ಲ. ತನಗೆ ಬೇಕಾದ ಇನ್ನೊಬ್ಬ ವರನನ್ನು ಅವರು ಸ್ವತಃ ಹುಡುಕಬಹುದಿತ್ತು ಅಥವಾ ಹುಡುಕುವಂತೆ ಪೋಷಕರಿಗೆ ಹೇಳಬಹುದಿತ್ತು’ ಎಂದೂ ಜೀವನಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ.
ಬೇರೆಯದೇ ಚಿತ್ರಣ: ಆದರೆ, ಜಶೋದಾಬೆನ್ ಅವರನ್ನು ಪತ್ತೆಮಾಡಿದ ಪತ್ರಕರ್ತರು ನೀಡುವ ಚಿತ್ರಣ ವಿಷಾದನೀಯವಾದದ್ದು.
ಈ ವರ್ಷದ ಆರಂಭದಲ್ಲಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿಗಾರರೊಬ್ಬರು ಜಶೋದಾಬೆನ್ ಅವರನ್ನು ಸಂದರ್ಶಿಸಿದ್ದರು. ತಾವು ಮೂರು ತಿಂಗಳುಗಳಿಗಿಂತ ಹೆಚ್ಚು ಸಮಯ ಮೋದಿ ಅವರೊಂದಿಗೆ ಇರಲಿಲ್ಲ ಎಂದು ಜಶೋದಾಬೆನ್ ಸಂದರ್ಶನದಲ್ಲಿ ಹೇಳಿದ್ದರು.
ತಮಗೆ ಮೋದಿ ಮೇಲೆ ಯಾವ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದ್ದ ಜಶೋದಾಬೆನ್, ‘ಈ ಅನುಭವದ ನಂತರ, ಎರಡನೇ ಮದುವೆಯಾಗಲು ಮನಸ್ಸು ಒಪ್ಪಲಿಲ್ಲ’ ಎಂದು, ಯಾಕೆ ಮರು ವಿವಾಹ ಆಗಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದರು.
ಶೌಚಾಲಯ, ಸ್ನಾನದ ಕೋಣೆಗಳಿಲ್ಲದ ಕೇವಲ ಒಂದು ಕೊಠಡಿಯ ಮನೆಯಲ್ಲಿ ವಾಸವಿದ್ದ ಜಶೋದಾಬೆನ್ ಅವರು ತಿಂಗಳಿಗೆ ರೂ.100 ಬಾಡಿಗೆ ಕಟ್ಟುತ್ತಿದ್ದರು. ಪ್ರತಿ ತಿಂಗಳು ಬರುವ ರೂ.14,000 ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದರು.
ತಾವು ಜಶೋದಾಬೆನ್ ಅವರನ್ನು ಹುಡುಕುತ್ತಿದ್ದುದನ್ನು ಅರಿತ ಉದ್ರಿಕ್ತ ಜನರ ಕೈಯಿಂದ ತಪ್ಪಿಸಲು ಕಷ್ಟಪಡಬೇಕಾಯಿತು ಎಂದು ಮೊತ್ತ ಮೊದಲ ಬಾರಿಗೆ ಜಶೋದಾಬೆನ್ ಸಂದರ್ಶನ ನಡೆಸಿದ್ದ ‘ಇಂಡಿಯನ್ ಎಕ್ಸ್ಪ್ರೆಸ್’ ವರದಿಗಾರ ದರ್ಶನ್ ದೇಸಾಯಿ ಹೇಳುತ್ತಾರೆ.
ಸಂದರ್ಶನ ಮುಗಿಸಿ ಮನೆಗೆ ತಲುಪಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ‘ನಿಮ್ಮ ಉದ್ದೇಶ ಏನು‘ ಎಂದು ಕೇಳಿದ್ದನ್ನು ದೇಸಾಯಿ ನೆನೆಯುತ್ತಾರೆ.
ಮೋದಿಗೆ ನೆರವಾಗಿದ್ದ ಅವಿವಾಹಿತ ಪಟ್ಟ: ನಂತರದ ವರ್ಷಗಳಲ್ಲಿ ಮೋದಿ ಅವರ ಅವಿವಾಹಿತ ಸ್ಥಿತಿ ಅವರ ರಾಜಕೀಯ ಚರಿತ್ರೆಯ ಪ್ರಮುಖ ಭಾಗವೇ ಆಗಿ ಹೋಯಿತು ಎಂದು ಪ್ರತಿಪಾದಿಸುತ್ತಾರೆ ‘ನರೇಂದ್ರ ಮೋದಿ: ದ ಮ್ಯಾನ್, ದ ಟೈಮ್ಸ್’ ಕೃತಿಯ ಲೇಖಕ ನೀಲಾಂಜನ ಮುಖ್ಯೋಪಾಧ್ಯಾಯ. ಭ್ರಷ್ಟಾಚಾರ, ಹಗರಣಗಳಿಂದಾಗಿ ವರ್ಚಸ್ಸು ಕಳೆದುಕೊಂಡ ಆಡಳಿತಾರೂಢ ಕಾಂಗ್ರೆಸ್ಗೆ ಹೊಸ ಪರ್ಯಾಯವಾಗಿ ನರೇಂದ್ರ ಮೋದಿ ಅವರು ಹೊರಹೊಮ್ಮಲು ಅವರ ‘ಒಂಟಿ ಜೀವನ’ ನೆರವಾಯಿತು ಎಂದು ಅಭಿಪ್ರಾಯಪಡುತ್ತಾರೆ.
‘ತಮ್ಮ ತಾಯಿಯನ್ನು ಕೂಡ ಅವರು ಜತೆಗೆ ಇಟ್ಟುಕೊಳ್ಳದೇ, ತನಗಾಗಿ, ತಮ್ಮವರಿಗಾಗಿ ಏನೂ ಮಾಡದೇ ಏಕಾಂಗಿ ಜೀವನ ನಡೆಸುತ್ತಿರುವುದು ಮೋದಿ ಅವರ ನೈತಿಕ ಪ್ರಭಾವಳಿಯನ್ನು ಇನ್ನಷ್ಟು ಹೆಚ್ಚಿಸಿತು’ ಎಂದು ಮುಖ್ಯೋಪಾಧ್ಯಾಯ ಹೇಳುತ್ತಾರೆ.
ಮೋದಿ ಅವರಿಗೆ ಹೋಲಿಸಿದರೆ ರಾಹುಲ್ ಗಾಂಧಿ ಅವರ ಕೌಟುಂಬಿಕ ಚಿತ್ರಣ ಸಂಪೂರ್ಣ ಭಿನ್ನ. ಅವರು ದೇಶದ ದೊಡ್ಡ ರಾಜಕೀಯ ಕುಟುಂಬದ ಕುಡಿ. ದೇಶದ ಪ್ರಧಾನಿಗಳಾಗಿದ್ದ ಅಜ್ಜಿ ಮತ್ತು ತಂದೆಯ ಹತ್ಯೆಗಳನ್ನು ಚಿಕ್ಕಂದಿನಲ್ಲೇ ನೋಡಿದವರು.
ಕುಟುಂಬದ ಚಟುವಟಿಕೆಗಳಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸುವ ವಿಚಾರದಲ್ಲಿ ರಾಹುಲ್ ಅವರದ್ದು ಡೋಲಾಯಮಾನ ನಿಲುವು. ತಮ್ಮ ಕುಟುಂಬವೇ ಯಥಾಸ್ಥಿತಿ ವಾದದ ಕೇಂದ್ರ ಬಿಂದು ಎಂಬುದನ್ನು ಮರೆತು ಯಥಾಸ್ಥಿತಿ ವಾದವನ್ನು ಅವರು ಟೀಕಿಸುತ್ತಾರೆ.
‘43 ವರ್ಷದ ರಾಹುಲ್ ಅವರಿಗೆ ಹಲವು ಗೆಳತಿಯರಿದ್ದರು. ಅವರು ಹೋದಲ್ಲೆಲ್ಲಾ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿತ್ತು’ ಎಂದು ಹೇಳುತ್ತಾರೆ ‘ಡಿಕೋಡಿಂಗ್ ರಾಹುಲ್ ಗಾಂಧಿ’ ಪುಸ್ತಕದ ಲೇಖಕಿ ಆರತಿ ರಾಮಚಂದ್ರನ್.
ಆದರೆ, ಕಳೆದ ವರ್ಷ ಅವರು ‘ನಾನು ಹೀಗೆಯೇ ಇರುತ್ತೇನೆ’ ಎಂದು ಹೇಳಿಕೆ ನೀಡಿದ ನಂತರ ಅವರ ಮದುವೆ ಕುರಿತ ವದಂತಿಗಳಿಗೆ ಶಾಶ್ವತವಾಗಿ ತೆರೆಬಿದ್ದಂತಾಗಿದೆ ಎಂಬುದು ಅವರ ಅಂಬೋಣ. ಭಾರತದ ರಾಜಕಾರಣದಲ್ಲಿ ಗಮನಾರ್ಹ ಸಂಗತಿ ಎಂದರೆ, ಪ್ರಮುಖ ರಾಜಕಾರಣಿಗಳಲ್ಲಿ ಹಲವರು ಅವಿವಾಹಿತರು ಎಂಬುದು.
ಮುಂದಿನ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ ಮೂವರು ಮಹಿಳಾ ರಾಜಕಾರಣಿಗಳಾದ ಎಐಎಡಿಎಂಕೆ ಮುಖ್ಯಸ್ಥೆ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವಿವಾಹಿತರು ಎಂಬುದು ಇಲ್ಲಿ ಉಲ್ಲೇಖನೀಯ.
(ಇಂಟರ್ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್)
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.