ರಾಯ್ಪುರ (ಪಿಟಿಐ): ‘ಲೋಕಸಭೆ ಚುನಾವಣೆಗೆ ಮುನ್ನ ನಕ್ಸಲೀಯರು ಛತ್ತೀಸಗಡದ ಬಸ್ತರ್್ ವಲಯದಲ್ಲಿ ತಮ್ಮ ಮಾಹಿತಿ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದ್ದು, ಪೊಲೀಸ್ ಠಾಣೆಯಂಥ ಪ್ರಮುಖ ಸ್ಥಳಗಳಲ್ಲಿ ಮಾಹಿತಿದಾರರನ್ನು ನಿಯೋಜಿಸಿದ್ದಾರೆ’ ಎಂದು ಗುಪ್ತಚರ ದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಈ ಕಾರ್ಯತಂತ್ರದ ಫಲವಾಗಿಯೇ ಇತ್ತೀಚೆಗೆ ದಾಂತೇವಾಡ ಜಿಲ್ಲೆಯ ಸುಕ್ಮಾದಲ್ಲಿ ಭದ್ರತಾ ಪಡೆ ಸಿಬ್ಬಂದಿ ಮೇಲೆ ನಕ್ಸಲರು ದಾಳಿ ನಡೆಸಿದರು’ ಎಂದು ರಾಜ್ಯ ಗುಪ್ತಚರ ದಳದ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘ಸ್ಥಳೀಯ ಮಾಹಿತಿದಾರರ ಪ್ರಕಾರ ಬಂಡುಕೋರರ ಸಣ್ಣ ಕಾರ್ಯತಂಡವೊಂದು ಪೊಲೀಸ್ ಠಾಣೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿರುವ ಭದ್ರತಾ ಪಡೆ ಶಿಬಿರಗಳ ಚಲನವಲನದ ಮೇಲೆ ಕಣ್ಣಿಟ್ಟಿದೆ’ ಎಂದೂ ಅವರು ತಿಳಿಸಿದ್ದಾರೆ. ಶಾಂತಿಯುತ ಮತದಾನಕ್ಕಾಗಿ ಬಸ್ತರ್್ ವಲಯದಲ್ಲಿ ಹೆಚ್ಚುವರಿಯಾಗಿ 80 ಅರೆಸೇನಾಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ.