ತುಮಕೂರು: ತಾಲ್ಲೂಕಿನ ಕೈದಾಳದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಮುದಾಯ ಭವನ ಹಾಗೂ ಜಕಣಾಚಾರಿ ಪುತ್ಥಳಿಯನ್ನು ಸರ್ಕಾರ ಪ್ರತಿಷ್ಠಾಪನೆ ಮಾಡಬೇಕು. ಇಲ್ಲವಾದರೆ ರಾಜ್ಯದಾದ್ಯಂತ ವಿಶ್ವಕರ್ಮ ಸಮುದಾಯ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ನಂದಿಯ ಆತ್ಮಾನಂದ ಆಶ್ರಮದ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ಎಚ್ಚರಿಸಿದರು.
ನಗರದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವಕರ್ಮ ಯಜ್ಞ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು. ಕೈದಾಳ ಅಭಿವೃದ್ಧಿಗೆ ಸರ್ಕಾರ ₨ 1 ಕೋಟಿ ಬಿಡುಗಡೆ ಮಾಡಿತ್ತು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕೂಡ ₨ 50 ಲಕ್ಷ ನೀಡಿತ್ತು. ಆದರೂ ಕೈದಾಳ ಅಭಿವೃದ್ಧಿ ಕಂಡಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸುಂದರ ಪ್ರವಾಸಿ ತಾಣವಾಗಿ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ವಿಶ್ವಕರ್ಮ ದೇವತೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ದೇವತೆಯಲ್ಲ. ನಾನಾ ರೂಪಾಲಂಕರಿತ ದೇವಶಿಲ್ಪಿ. ಹುಟ್ಟು ಸಾವಿಲ್ಲದ ಚೈತನ್ಯ ಎಂದು ಹೇಳಿದರು. ಮಾಜಿ ಸಚಿವ ಎಸ್.ಶಿವಣ್ಣ ಮಾತನಾಡಿ, ಸಣ್ಣ ಸಮುದಾಯಗಳನ್ನು ಸರ್ಕಾರವೇ ಗುರುತಿಸ ಅಭಿವೃದ್ಧಿಗೆ ನೆರವಾಗಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಉನ್ನತ ಚಿಂತನೆಗಳು ಅಗತ್ಯ. ವಂಶಪಾರಂಪರ್ಯವಾಗಿ ಬಂದ ಕುಲಕಸುಬುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿಸಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಸಮುದಾಯದ ಮುಖಂಡರಾದ ಡಾ.ಕೆ.ವಿ.ಕೃಷ್ಣಮೂರ್ತಿ, ನಾಗರಾಜಾಚಾರ್, ಎನ್.ಎಸ್.ರವಿ, ಬಿ.ವಿ.ಗಂಗರಾಜು, ಶಶಿಧರ್, ಗಿರೀಶ್, ಎಸ್.ಮಂಜುನಾಥಾಚಾರ್, ಗೋವರ್ಧನಾಚಾರ್, ನಂಜುಂಡಾಚಾರ್, ಎಂ.ಬಿ.ಕೃಷ್ಣ, ಆನಂದರಾಮು ಮತ್ತಿತರರು ಹಾಜರಿದ್ದರು. ಸಮಾರಂಭ ಮುಗಿದ ಬಳಿಕ ಸಪ್ತಾಶ್ವ ರಥದ ಮೇಲೆ ವಿರಾಟ್ ವಿಶ್ವಕರ್ಮ ಪರಬ್ರಹ್ಮರ ವೈಭವದ ಉತ್ಸವ ಜರುಗಿತು.