ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತವನ್ನು ಈಗ ಅಧಿಕಾರಿಗಳು ವಹಿಸಿಕೊಂಡಿದ್ದಾರೆ. ಇದು ಒಳ್ಳೆಯದೇ. ತಿಂಗಳ ಹಿಂದೆ ನಡೆದ ಡಿ.ಕೆ. ರವಿ ಸಾವಿನ ಪ್ರಕರಣದಲ್ಲಿ ಅನೇಕ ಸಂಗತಿಗಳು ಬಯಲಾದವು. ಅದರಲ್ಲಿ ಬೆಚ್ಚಿಬೀಳಿಸಿದ್ದು– ಕೆಲವು ಶಾಸಕರು, ನಿಯಮಾನುಸಾರ ಕರ್ತವ್ಯ ನಿರ್ವಹಿಸುವ ಅಧಿಕಾರಿಯನ್ನು ಹೆದರಿಸಿ ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡುವಂತೆ ಹೇಳಿದರೆ
ನ್ನಲಾದ ಪ್ರಕರಣ.
ಇದರಿಂದಾಗಿ, ಇಂದಿನ ಭ್ರಷ್ಟ ವ್ಯವಸ್ಥೆಗೆ ರಾಜಕಾರಣಿಗಳು, ಜನಪ್ರತಿನಿಧಿಗಳೇ ಕಾರಣ. ಅಧಿಕಾರಿಗಳು, ನೌಕರರಲ್ಲ ಎಂದು ಜನ ಭಾವಿಸುವಂತಾಗಿದೆ. ನೌಕರರು ನಿಗದಿತ ವೇತನ ಪಡೆಯುತ್ತಾರೆ. ಜತೆಗೆ ಅವರಿಗೆ ಬೇರೆ ಸೌಲಭ್ಯಗಳೂ ಇವೆ. ನಿವೃತ್ತಿಯ ನಂತರ ಪಿಂಚಣಿ ಪಡೆಯುತ್ತಾರೆ. ನೌಕರರ ಇಷ್ಟೆಲ್ಲ ಯೋಗಕ್ಷೇಮದ ಖರ್ಚನ್ನು ಭರಿಸುವುದು ಜನಸಾಮಾನ್ಯರು ನೀಡುವ ತೆರಿಗೆಯಿಂದ.
ಹೀಗಿದ್ದೂ ಅದೇ ಜನರನ್ನೇ ಅಧಿಕಾರಿಗಳು ಶೋಷಣೆಗೆ ಒಳಪಡಿಸುವುದು ರಾಜಕಾರಣಿಗಳ ಒತ್ತಡಕ್ಕೆ ಮಣಿದೇ ಇರಬೇಕು. ಅವರ ಒತ್ತಡ, ಕೃಪಾಶ್ರಯವೇ ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿರುವುದು. ಈಗ ಬೆಂಗಳೂರು ಆಡಳಿತ ಅಧಿಕಾರಿಗಳ ಕೈಯಲ್ಲಿದೆ. ನೌಕರರಿಂದ ಹಣ ಪೀಕಲು, ಲಂಚದ ಪಾಲು ಪಡೆಯಲು ಜನಪ್ರತಿನಿಧಿಗಳಿಲ್ಲ.
ಅಂದಮೇಲೆ ಸಾರ್ವಜನಿಕರ ಕೆಲಸಗಳು ಸಲೀಸಾಗಿ ನಡೆಯಬೇಕಲ್ಲವೇ? ಭ್ರಷ್ಟತೆಯ ನಿಜ ಮೂಲ ನೌಕರರ ದುರಾಸೆಯೋ ರಾಜಕಾರಣಿಗಳ ಧನ ದಾಹವೋ ಎಂಬುದನ್ನು ತಿಳಿಯಲು ಜನರು ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದಾರೆ.
ಸತ್ಯಬೋಧ, ಬೆಂಗಳೂರು