ಪ್ರಧಾನಿ ನರೇಂದ್ರ ಮೋದಿ ಅವರು ಜಪಾನಿನ ಉದ್ಯಮಿಗಳಿಗೆ ರತ್ನಗಂಬಳಿ ಸ್ವಾಗತ ನೀಡಿದ ಪರಿ ಇದು. ಸೋಮವಾರ ಜಪಾನ್ ಪ್ರಧಾನಿ ಶಿಂಝೊ ಅಬೆ ಜತೆ ನಡೆದ ಸಭೆಯಲ್ಲಿ ಮೋದಿ ಅವರು ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮನವರಿಕೆ ಮಾಡಿಕೊಟ್ಟರು.
ಭಾರತದಲ್ಲಿ ಬಂಡವಾಳ ಹೂಡಿಕೆಗೆ ಮುಂದಾದರೆ ಯಾವುದೇ ರೀತಿಯ ಅಡೆತಡೆಯೂ ಎದುರಾಗದಂತೆ ಶೀಘ್ರ ಗತಿಯಲ್ಲಿ ಅನುಮೋದನೆ ನೀಡಲಾಗುವುದು. ಇತ್ತೀಚೆಗೆ ರಕ್ಷಣಾ ವಲಯ, ರೈಲ್ವೆ, ವಿಮಾ ಕ್ಷೇತ್ರ, ವಿಮಾಯಾನ ರಂಗಗಳಲ್ಲಿ ‘ಎಫ್ಡಿಐ’ ಮಿತಿಯನ್ನು ಹೆಚ್ಚಿಸಲಾಗಿದೆ. ಈ ವಲಯಗಳಲ್ಲಿ ಹೂಡಿಕೆಗೆ ಅನಂತ ಸಾಧ್ಯತೆಗಳಿವೆ ಎಂದರು.
ಸೇವಾ ಗುಣಮಟ್ಟ, ಸರಕು ವಿಲೇವಾರಿ ಮತ್ತು ಕೌಶಲ ಅಭಿವೃದ್ಧಿಯಲ್ಲಿ ಜಪಾನ್ ಭಾರತಕ್ಕೆ ಮಾದರಿಯಾಗಿದೆ. ನಾವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಣಕಾಸು ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ‘ಜಿಡಿಪಿ’ ಶೇ 5.7ರಷ್ಟು ಪ್ರಗತಿ ಕಂಡಿದೆ. ಈಗ ಯುಪಿಎ ಸರ್ಕಾರ ಇದ್ದಾಗ ಇದ್ದ ನಿರಾಶಾದಾಯಕ ಸ್ಥಿತಿ ಇಲ್ಲ. ಉದ್ಯಮಿಗಳು ಧೈರ್ಯದಿಂದ ಬಂಡವಾಳ ತೊಡಗಿಸಬಹುದು ಎಂದರು.