ನವದೆಹಲಿ (ಐಎಎನ್ಎಸ್): ಜಾತಿಯ ಹೆಸರಿನಲ್ಲಿ ಜನರನ್ನು ಒಡೆದು ಆಳುವ ರಾಜಕೀಯದಲ್ಲಿ ನಂಬಿಕೆ ಇಡಬೇಡಿ. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂಬ ರಾಜಕೀಯ ವಿಂಗಡನೆಯು ಈಗಾಗಲೇ ದೇಶಕ್ಕೆ ಸಾಕಷ್ಟು ಹಾನಿ ಉಂಟುಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಮುಖಂಡರಿಗೆ ಹೇಳಿದ್ದಾರೆ.
ಆಲ್ ಇಂಡಿಯಾ ಇಮಾಮ್ ಸಂಸ್ಥೆಯ ಪದಾಧಿಕಾರಿಗಳ ಜತೆ ಸಂವಾದ ನಡೆಸಿದ ಅವರು, ದೇಶವನ್ನು ಒಡೆದು ಆಳುವ ವೋಟ್ ಬ್ಯಾಂಕ್ ರಾಜಕೀಯದಲ್ಲಿ ನಂಬಿಕೆ ಇಡಬೇಡಿ. ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಉದ್ಯೋಗ ಸೃಷ್ಟಿ ಮತ್ತು ಅಭಿವೃದ್ಧಿ ಇವೆರಡೇ ಪರಿಹಾರ. ಇದನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇನೆ ಎಂದರು.
ಮೋದಿ ಅವರ ಒಂದು ವರ್ಷದ ಕಾರ್ಯವೈಖರಿಗೆ ಮುಸ್ಲಿಂ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.