ಬ್ರಿಟಿಷ್ ಅಧಿಕಾರಿ ಚಾರ್ಲ್ಸ್ ಮೆಟ್ಕಾಫ್, ಗ್ರಾಮಗಳನ್ನು ಪುಟಾಣಿ ಸಾಮ್ರಾಜ್ಯಗಳು ಎಂದು ಉದ್ಗರಿಸಿದ್ದರು (ಸಂಗತ ಮೇ 27). ಆದರೆ ಪ್ರಜಾಪ್ರಭುತ್ವದ ತಳಹದಿಯಾದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಜಾತಿ ತನ್ನ ಹೊಸ ಬಗೆಯ ಪಾತ್ರವನ್ನು ಹುಟ್ಟು ಹಾಕಿದೆ. ಜಾತಿಯೊಳಗೆ ಕುಲ, ಪೈಕಿ, ಗುಂಪು ಮುಂತಾದ ಶಬ್ದಗಳು ಹುಟ್ಟಿಕೊಂಡಿವೆ. ಜಾತಿ ನಾಶವಾಗುವ ಬದಲು ಇನ್ನಷ್ಟು ಹಿಗ್ಗುತ್ತಿದೆ.
ಅಂಬೇಡ್ಕರ್ ಅವರು ಗ್ರಾಮಗಳನ್ನು ‘ಜಾತೀಯತೆಯ ಬಿಲ’ಗಳೆಂದು ಕರೆದಿದ್ದರು. ನಮ್ಮ ಚುನಾವಣಾ ವ್ಯವಸ್ಥೆಯು ಜಾತಿಯ ಬಿಲವನ್ನು ಮುಚ್ಚುವ ದಿಕ್ಕಿನಲ್ಲಿ ಸಾಗುತ್ತಿಲ್ಲ.
ಕೆಲವು ಕಡೆಗಳಲ್ಲಿ ದೇವಸ್ಥಾನ ಜೀರ್ಣೋದ್ಧಾರದ ಹೆಸರಿನಲ್ಲಿ ಉಳ್ಳವರಿಂದ ಕೆಲವು ಸ್ಥಾನಗಳು ಖರೀದಿಯಾಗಿವೆ, ಇನ್ನು ಕೆಲವೆಡೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ‘ಮೀಸಲು ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಹಾಕಬೇಡಿ, ಅವರು ಹೆಚ್ಚು ಮತಗಳನ್ನು ಪಡೆದುಕೊಂಡರೆ ಸಾಮಾನ್ಯ ಕ್ಷೇತ್ರದಲ್ಲಿ ಆಯ್ಕೆಯಾಗಬಹುದು’ ಎಂದು ಮತದಾರರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯ ಸಾಕಾರಗೊಳ್ಳುವುದು ಯಾವಾಗ?