ಬೆಂಗಳೂರು: ಸಚಿವ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಖಾತೆ ಬದಲಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನೀಡಿರುವ ಕಾರಣ, ರಾಜೀನಾಮೆ ಪ್ರಹಸನ ಬಹುತೇಕ ಅಂತ್ಯಗೊಂಡಂತಾಗಿದೆ.
ಸಚಿವ ಸ್ಥಾನಕ್ಕೆ ಸತೀಶ್ ಅವರು ರಾಜೀನಾಮೆ ನೀಡಿದ ನಂತರ ಸಂಧಾನ ಸಲುವಾಗಿ ನಗರಕ್ಕೆ ಬಂದಿದ್ದ ಬೆಳಗಾವಿಯ ಕಾಂಗ್ರೆಸ್ ನಿಯೋಗದ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ರಾತ್ರಿ ಒಂದೂವರೆ ಗಂಟೆ ಕಾಲ ಮಾತುಕತೆ ನಡೆಸಿದರು.
ನಿಯೋಗದಲ್ಲಿದ್ದ ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ವೀರಕುಮಾರ್ ಪಾಟೀಲ್, ಫಿರೋಜ್ ಸೇಠ್, ಮಾಜಿ ಶಾಸಕ ಎಸ್.ಬಿ.ಘಾಟ್ಗೆ ಮತ್ತಿತರರು ಸತೀಶ್ ಅವರನ್ನು ಯಾವುದೇ ಕಾರಣಕ್ಕೂ ಕೈಬಿಡಬೇಡಿ ಎಂದು ಮನವಿ ಮಾಡಿದರು.
‘ಸತೀಶ್ ಅವರ ಕೋರಿಕೆಯಂತೆ ಖಾತೆ ಬದಲಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಇರುವ ಎಲ್ಲ ಅಧಿಕಾರವನ್ನೂ ಅವರಿಗೆ ನೀಡ
ರಹಸ್ಯ ಏನೂ ಇಲ್ಲ: ಸಿ.ಎಂ |
---|
‘ಯಾವುದೇ ರಹಸ್ಯ ಕಾರ್ಯಾ ಚರಣೆ ಇಲ್ಲ. ಎಲ್ಲವೂ ಪಾರದರ್ಶಕ ವಾಗಿಯೇ ನಡೆಯುತ್ತೆ. ಸತೀಶ್ ಜಾರಕಿ ಹೊಳಿ ಜೊತೆ ಮಾತನಾಡಿ ಸಮಸ್ಯೆ ಪರಿ ಹರಿಸುತ್ತೇವೆ’ ಹಸ್ತಕ್ಷೇಪ ಇಲ್ಲ |
ಬೇಕು. ಅವರು ಹೇಳುವ ಅಧಿಕಾರಿಗಳನ್ನೇ ಜಿಲ್ಲೆಗೆ ನಿಯೋಜಿಸಬೇಕು. ಅವರ ಗಮನಕ್ಕೆ ತರದೆ ಪೊಲೀಸ್ ಅಧಿಕಾರಿಗಳನ್ನು ವರ್ಗ ಮಾಡಬಾರದು’ ಎಂದು ನಿಯೋಗ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿತು ಎನ್ನಲಾಗಿದೆ.
ಇದಕ್ಕೆ ಮುಖ್ಯಮಂತ್ರಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಏಪ್ರಿಲ್ನಲ್ಲಿ ನಡೆಯುವ ಸಂಪುಟ ಪುನರ್ರಚನೆ ವೇಳೆ ಖಾತೆ ಬದಲಿಸುವ ಭರವಸೆ ನೀಡಿದರು ಎಂದು ಗೊತ್ತಾಗಿದೆ.
ಭೇಟಿ ಸಂದರ್ಭದಲ್ಲಿ ಲಕ್ಷ್ಮೀ ಅವರು ತಮ್ಮ ಮೊಬೈಲ್ ದೂರವಾಣಿ ಮೂಲಕ ಸತೀಶ್ ಅವರನ್ನು ಸಂಪರ್ಕಿಸಿ, ಮುಖ್ಯಮಂತ್ರಿ ಜತೆ ಮಾತನಾಡಿಸಿದರು. ಮುಖ್ಯಮಂತ್ರಿಯವರು ಶುಕ್ರವಾರ ಸಂಜೆ ಭೇಟಿ ಮಾಡುವಂತೆ ಸತೀಶ್ ಅವರಿಗೆ ಸೂಚಿಸಿದ್ದು, ಅದಕ್ಕೆ ಅವರು ಒಪ್ಪಿದರು ಎಂದು ಗೊತ್ತಾಗಿದೆ. ಇದಕ್ಕೂ ಮುನ್ನ ಡಾ.ಎಚ್.ಸಿ. ಮಹದೇವಪ್ಪ ಜತೆ ಬೆಳಗಾವಿ ನಿಯೋಗ ಒಂದು ಗಂಟೆ ಕಾಲ ಚರ್ಚೆ ನಡೆಸಿತು.
ಕೆಂಪಯ್ಯ ಜತೆ ಚರ್ಚೆ ನಿರಾಕರಿಸಿಲ್ಲ (ಬೆಳಗಾವಿ ವರದಿ): ‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಭೇಟಿಯಾಗಲು ಆಗಮಿಸಿದ್ದ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರೊಂದಿಗೆ ಚರ್ಚೆಗೆ ನಿರಾಕರಿಸಿಲ್ಲ. ಈ ಕುರಿತು ಪತ್ರಿಕೆಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರವಾಗಿದೆ’ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
‘ಕೆಂಪಯ್ಯ ಅವರನ್ನು ನಾನು ತರಾಟೆಗೆ ತೆಗೆದುಕೊಂಡಿಲ್ಲ. ಅವರ ಜೊತೆಗೆ ನಮ್ರವಾಗಿಯೇ ನಡೆದುಕೊಂಡಿದ್ದೇನೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿಗ್ವಿಜಯ್ ಭೇಟಿಗೆ ಜಾರಕಿಹೊಳಿ ಇಂದು ಬೆಂಗಳೂರಿಗೆ
ಗೋಕಾಕ (ಬೆಳಗಾವಿ): ತಮ್ಮ ರಾಜೀನಾಮೆಯಿಂದ ಉಂಟಾಗಿರುವ ರಾಜಕೀಯ ವಿದ್ಯಮಾನಗಳ ನಡೆಯ ಸ್ಪಷ್ಟ ಚಿತ್ರಣ ಬಿಟ್ಟುಕೊಡದ ಅಬಕಾರಿ ಸಚಿವ ಸತೀಶ ಜಾರಕಿಹೊಳಿ, ಶುಕ್ರವಾರ (ಜ. 30) ಬೆಳಿಗ್ಗೆ ವಿಮಾನದಲ್ಲಿ ಬೆಂಗಳೂರಿಗೆ ತೆರಳಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಅವರು ಗುರುವಾರ ಬೆಂಗಳೂರಿಗೆ ಹೋಗಲಿಲ್ಲ. ಗೋಕಾಕದಲ್ಲಿಯೇ ಇದ್ದು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ದಿಗ್ವಿಜಯ್ ಸಿಂಗ್ ಭೇಟಿ ಮಾಡಿದ ನಂತರವೇ ಮುಖ್ಯಮಂತ್ರಿ ಜತೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಆಪ್ತರೊಡನೆ ಸಮಾಲೋಚನೆ: ಗುರುವಾರ ಗೋಕಾಕದ ನಿವಾಸದಲ್ಲಿಯೇ ಇದ್ದ ಸತೀಶ್, ಆಪ್ತರೊಂದಿಗೆ ಸಮಾಲೋಚನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.