ಕಡೂರು (ಚಿಕ್ಕಮಗಳೂರು ಜಿ.): ಪಟ್ಟಣದ ಎರಡನೇ ವಾರ್ಡ್ ವ್ಯಾಪ್ತಿಯ ರಹಮತ್ ನಗರ ಪ್ರದೇಶದಲ್ಲಿ ವಾಸವಿರುವ ನವಾಬ್ಜಾನ್ ಅವರ ಪತ್ನಿ ಅಬೀದಾಬಾನು (40) 2014ರ ಆ.20ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಅ.21ರಂದು ಕಡೂರು ಪುರಸಭೆಯ ಜನನ ಮರಣ ವಿಭಾಗದಿಂದ ಪ್ರಮಾಣಪತ್ರವನ್ನು ನೀಡಲಾಗಿದೆ.
ಪ್ರಮಾಣಪತ್ರದ ಮಹಜರು ಮಾಡಿದ್ದು, ಇಸ್ಮಾಯಿಲ್, ರಫೀಕ್, ಹಸೀನಾ, ಕೃಷ್ಣಮೂರ್ತಿ ಅವರು ‘ಅಬೀದಾಬಾನು ಸಾವಪ್ಪಿರುವುದನ್ನು ಕಣ್ಣಾರೆ ನೋಡಿದ್ದೇವೆ’ ಎಂದು ತಿಳಿಸಿ ಸಹಿ ಮಾಡಿದ್ದಾರೆ. ಮರಣ ಹೊಂದಿದ್ದಾರೆಂದು ಹೇಳಲಾದ ಅಬೀದಾಬಾನು ಬೆಂಗಳೂರಿನಲ್ಲಿ ವಾಸವಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ಕುರಿತು ತರೀಕೆರೆ ಉಪ ವಿಭಾಗಾಧಿಕಾರಿ ಸಂಗಪ್ಪ ಕರಡಿ ಅವರನ್ನು ಕೇಳಿದಾಗ, ‘ಈ ರೀತಿ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ನಾನೇ ಖುದ್ದಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.