ಕಾಪು (ಪಡುಬಿದ್ರಿ): ಕಾಪು ವಿದ್ಯಾನಿಕೇತನ ಸೆಮಿನಾರ್ ಹಾಲ್ನಲ್ಲಿ ಭಾನುವಾರ ನಡೆದ ಕರಾವಳಿ ಕಿರುಚಿತ್ರೋತ್ಸವದಲ್ಲಿ ಭಾಸ್ಕರ ಮಣಿಪಾಲ್ ನಿರ್ದೇಶನದ ಗುಜರಿ ತುಳು ಕಿರುಚಿತ್ರ ಹಾಗೂ ಗಣೇಶ್ ಕಂಡ್ಲೂರು ನಿರ್ದೇಶನದ ಜೀವಾ ಕನ್ನಡ ಕಿರುಚಿತ್ರಗಳಿಗೆ ಪ್ರಥಮ ಅತ್ಯುತ್ತಮ ಪ್ರಶಸ್ತಿಯನ್ನು ನೀಡಲಾಯಿತು.
ದಿಶಾ ಕಮ್ಯೂನಿಕೇಶನ್ಸ್ ಕಟಪಾಡಿ -ಮತ್ತು ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಾವಳಿ ಕಿರುಚಿತ್ರೋತ್ಸವಕ್ಕೆ ೫ ಕನ್ನಡ ೪ ತುಳು ಚಿತ್ರ ಅಯ್ಕೆಯಾಗಿದ್ದವು. ಪ್ರಭಾಕರ್ ಆಚಾರ್ಯ ನಿರ್ದೇಶನದ ಬದ್ಕ್ ಮತ್ತು ದಿ.ಅನಿರುದ್ಧ್ ಭಟ್ ನಿರ್ದೇಶನದ ಸಂಚಲನ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡವು. ಬದ್ಕ್ ಚಿತ್ರಕ್ಕಾಗಿ ಜೇಸನ್ ಡಿಸೋಜ, ಸಂಚಲನ ಚಿತ್ರಕ್ಕಾಗಿ ರಮೇಶ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ, ಜೀವಾ ಚಿತ್ರದ ಗಣೇಶ್ ಕಂಡ್ಲೂರ್, ಬಾಲೆದ ಬದ್ಕ್ ಚಿತ್ರದ ಬ್ರಿಜೇಶ್ ಮಣಿಪಾಲ್ ಅತ್ಯುತ್ತಮ ಚಿತ್ರ ನಿರ್ದೇಶಕ ಪ್ರಶಸ್ತಿಗೆ ಭಾಜನರಾದರು.
ಬದ್ಕ್ ಚಿತ್ರದ ಪ್ರಭಾಕರ್ ಆಚಾರ್ಯ ಅತ್ಯುತ್ತಮ ನಟ, ಗುಜರಿ ಚಿತ್ರದ ಸುಜಾತ ಶೆಟ್ಟಿ ಅತ್ಯುತ್ತಮ ನಟಿ ಪ್ರಶಸ್ತಿಯ ಗರಿಯನ್ನು ತಮ್ಮ ಮುಡಿ-ಗೇರಿಸಿಕೊಂಡರು. ಸತ್ಯಾದಿಗೆದ ಮಣ್ಣ್ ಚಿತ್ರದ ನಟ ಸತೀಶ್ ಆಚಾರ್ಯ, ಜೀವಾ ಚಿತ್ರದ ಅರವಿಂದ ಹೆಗ್ಡೆ, ಪೋಷಕ ಪಾತ್ರದ ಸಂಜೀವ ಸುವರ್ಣ ವಿಶೇಷ ಪ್ರಶಸ್ತಿ ಹಾಗೂ ಮುಖಪುಟ, ಅಂತರಾಳ ಚಿತ್ರ, ಒಲವಿನ ರಾಣಿ ವಿಡಿಯೊ ಆಲ್ಬಮ್ ವಿಶೇಷ ಪುರಸ್ಕಾರ ಗೆದ್ದುಕೊಂಡಿದೆ.
ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರಾವಳಿ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ವಿವಿಧ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು. -ಹಾಲಿವುಡ್ ಕೆಮರಾಮ್ಯಾನ್ ಲಕ್ಷ್ಮೀಶ್ ಶೆಟ್ಟಿ ಮುಂಬೈ, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿಯ ಉದ್ಯಮಿ ಹರೀಶ್ ಕಿಣಿ ಅಲೆವೂರು, ಚಿತ್ರ ನಿರ್ದೇಶಕ ಕೃಷ್ಣಪ್ರಸಾದ್ ಬೆಂಗಳೂರು, ಪ್ರೈಮ್ ಟಿವಿಯ ರೂಪೇಶ್ ಕಲ್ಮಾಡಿ, ಉಡುಪಿ ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ಯು.ಕೆ.ಶೆಟ್ಟಿ, ಕಾಪು ಜೆಸಿಐ ಅಧ್ಯಕ್ಷ ಅನಿಲ್ ಕುಮಾರ್, ರಂಗ್ ತುಳು ಚಿತ್ರದ ನಾಯಕಿ ದೀಕ್ಷಿತಾ ಆಚಾರ್ಯ, ನಟ ರಜನೀಶ್, ಈಟಿವಿ ಇಂಡಿಯನ್ ರಿಯಾಲಿಟಿ ಶೋ ಖ್ಯಾತಿಯ ಸುಷ್ಮಾರಾಜ್, ಧಾರಾವಾಹಿ ನಿರ್ಮಾಪಕ ಅಶೋಕ್ ಎಂ.ಸುವರ್ಣ, ಪತ್ರಕರ್ತ ಶೇಖರ್ ಅಜೆಕಾರ್ ಉಪಸ್ಥಿತರಿದ್ದರು.
ಕರಾವಳಿ ಕಿರುಚಿತ್ರೋತ್ಸವ ಸಮಿತಿ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿದರು. ಪುಂಡಲೀಕ ಮರಾಠೆ ನಿರೂಪಿಸಿದರು. ಮನೋಜ್ ಕಡಬ ವಂದಿಸಿದರು.ಕನ್ನಡ ಮತ್ತು ಸಂಸ್ಕ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಕಲಾವಿದ ಪ್ರಕಾಶ್ ಸುವರ್ಣ ಕಟಪಾಡಿ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.