ಬೆಂಗಳೂರು: ‘ಉಪಗ್ರಹಗಳು, ಸಂಪರ್ಕ ಕ್ರಾಂತಿ, ವಿಜ್ಞಾನದ ಆವಿಷ್ಕಾರ ಹಾಗೂ ತಂತ್ರಜ್ಞಾನದ ನೆರವಿನಿಂದ ಸುದ್ದಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಈ ವಾಹಿನಿಗಳ ಸ್ಟುಡಿಯೊದೊಳಗೆ ಕುಳಿತು ಗ್ರಹಗತಿಯೇ ಸರಿ ಇಲ್ಲ ಎಂದು ಜ್ಯೋತಿಷಿಗಳು ಬೊಗಳೆ ಬಿಡುತ್ತಾರೆ’
–ವಾಹಿನಿಗಳಲ್ಲಿ ಜ್ಯೋತಿಷ ಕಾರ್ಯಕ್ರಮ ನಡೆಸಿಕೊಡುವ ಜ್ಯೋತಿಷಿಗಳನ್ನು ಈ ರೀತಿ ತರಾಟೆಗೆ ತೆಗೆದುಕೊಂಡಿದ್ದು ಖ್ಯಾತ ವಿಜ್ಞಾನಿ ಹಾಗೂ ಇಸ್ರೊ ಮಾಜಿ ಮುಖ್ಯಸ್ಥ ಪ್ರೊ.ಯು.ಆರ್.ರಾವ್.
ಬ್ರೇಕ್ಥ್ರೂ ಸೈನ್ಸ್ ಸೊಸೈಟಿ ಹಾಗೂ ಕೆಎಲ್ಇ ಸಂಸ್ಥೆಯ ಎಸ್.ನಿಜಲಿಂಗಪ್ಪ ಕಾಲೇಜು ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಆರಂಭವಾದ ‘ಜನರ ವಿಜ್ಞಾನ ಹಬ್ಬ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಜಗತ್ತು ವೈಜ್ಞಾನಿಕವಾಗಿ ಬಹಳಷ್ಟು ಪ್ರಗತಿ ಸಾಧಿಸಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿಯಾಗಿದೆ. ಆದರೂ ಈ ಜ್ಯೋತಿಷಿಗಳು ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಅಂಥವರಿಗೆ ಸುದ್ದಿ ವಾಹಿನಿಗಳು ಅವಕಾಶ ಮಾಡಿಕೊಡುತ್ತಿವೆ. ಕ್ರಿಕೆಟ್, ರಾಜಕೀಯ, ಸಿನಿಮಾದ ಬಳಿಕ ಬೊಗಳೆ ಜ್ಯೋತಿಷಿಗಳಿಗೆ ಮಾಧ್ಯಮಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಬಹುದೂರದಲ್ಲಿರುವ ಗ್ರಹಗಳು, ತಾರೆಗಳು ತಮ್ಮ ಕೆಲಸ ಬಿಟ್ಟು ಈ ಜ್ಯೋತಿಷಿಗಳ ಮಾತಿಗೆ ಕಿವಿಗೊಡುತ್ತವೆಯೇ? ಜನರ ಕಷ್ಟಕ್ಕೂ, ಗ್ರಹಗಳಿಗೂ ಏನು ಸಂಬಂಧ? ಎಂದು ಪ್ರಶ್ನಿಸಿದರು.
ಬಾಹ್ಯಾಕಾಶ ಅಧ್ಯಯನ ಏಕೆ?: ‘ಜನಸಂಖ್ಯೆ ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಆಹಾರದ ಉತ್ಪಾದನೆ ಆಗುತ್ತಿಲ್ಲ. ಮುಂದಿನ 200 ವರ್ಷಗಳಲ್ಲಿ ಎಲ್ಲಾ ಸಂಪನ್ಮೂಲಗಳು ಖಾಲಿಯಾಗಲಿವೆ. ಆಗ ಬಾಹ್ಯಾಕಾಶ ವಿಜ್ಞಾನ ನೆರವಿಗೆ ಬರಬಹುದು. ಮಂಗಳಗ್ರಹ ಹಾಗೂ ಚಂದ್ರನಲ್ಲಿ ದಲ್ಲಿ ಸಂಪನ್ಮೂಲಗಳನ್ನು ಹುಡುಕಬಹುದು. ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ಮಾತ್ರ ಸಂಪನ್ಮೂಲ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಯುವ ಪೀಳಿಗೆ ವಿಜ್ಞಾನಕ್ಕೆ ಒತ್ತು ನೀಡಿ ಹೊಸ ಹೊಸ ಸಂಶೋಧನೆ ನಡೆಸಬೇಕು’ ಎಂದರು.
ಕಾರ್ಯಕ್ರಮದಲ್ಲಿ ಎಸ್.ನಿಜಲಿಂಗಪ್ಪ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ಸಿ. ಹೆಗಡಿ, ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಆರ್.ವಿನಯ್ಕುಮಾರ್, ಬೆಂಗಳೂರು ಜಿಲ್ಲೆ ಬ್ರೇಕ್ಥ್ರೂ ಸೈನ್ಸ್ ಸೊಸೈಟಿಯ ಅಧ್ಯಕ್ಷೆ ಕೆ.ಎಸ್.ರಜನಿ, ಸೊಸೈಟಿಯ ರಾಜ್ಯ ಸಂಚಾಲಕ ಸತೀಶ್ಕುಮಾರ್ ಅವರು ಇದ್ದರು.
ವಿಜ್ಞಾನಿಗಳು, ಪ್ರಾಧ್ಯಾಪಕರು, ರಾಜ್ಯದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಾದರಿಗಳ ಪ್ರದರ್ಶನ: ಈ ಹಬ್ಬದ ಅಂಗವಾಗಿ ಕಾಲೇಜಿನಲ್ಲಿ ವಿಜ್ಞಾನ ಮಾದರಿಗಳ ಪ್ರದರ್ಶನ, ವಿಚಾರಗೋಷ್ಠಿ ಹಾಗೂ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.
ಇಸ್ರೊ ವತಿಯಿಂದ ಭಾರತದ ಅನೇಕ ಉಪಗ್ರಹ ಹಾಗೂ ರಾಕೆಟ್ ಮಾದರಿಯನ್ನು ಪ್ರದರ್ಶನಕ್ಕಿಡಲಾಗಿದೆ.
ಗಮನ ಸೆಳೆದ ಮಂಗಳ ನೌಕೆ ಮಾದರಿ: ಸೆಪ್ಟೆಂಬರ್ 24ರಂದು ಮಂಗಳನ ಅಂಗಳದಲ್ಲಿ ಇಳಿಯಲಿರುವ ಮಂಗಳ ನೌಕೆ (ಮಾರ್ಸ್ ಆರ್ಬಿಟರ್ ಮಿಷನ್) ಮಾದರಿಯು ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯಿತು. ಈ ನೌಕೆ ಹಾಗೂ ರಾಕೆಟ್ ಬಗ್ಗೆ ಮಕ್ಕಳಿಗೆ ಖುದ್ದಾಗಿ ಯು.ಆರ್.ರಾವ್ ಅವರು ಮಾಹಿತಿ ನೀಡಿದ್ದು ವಿಶೇಷ. ಮಕ್ಕಳು ಕೇಳಿದ ಗಂಭೀರ ಪ್ರಶ್ನೆಗಳಿಂದ ಅವರು ಅಚ್ಚರಿಗೆ ಒಳಗಾದರು.
2013ರ ನವೆಂಬರ್ 5ರಂದು ಪಿಎಸ್ಎಲ್ವಿ–ಸಿ 25 ವಾಹಕದ (ರಾಕೆಟ್) ಮೂಲಕ ಉಡ್ಡಯನ ಮಾಡಲಾಗಿರುವ ಮಂಗಳ ನೌಕೆ ಈಗ ಕೆಂಪು ಕಾಯದ ಸಮೀಪಕ್ಕೆ ಬಂದಿದೆ. ನೌಕೆಯು ಶೇಕಡಾ 80ರಷ್ಟು ದೂರ ಕ್ರಮಿಸಿದ್ದು, ಸೆಪ್ಟೆಂಬರ್ 24ರಂದು ಮಂಗಳನ ಅಂಗಳದಲ್ಲಿ ಇಳಿಯಲಿದೆ ಎಂದು ಇಸ್ರೊ ವಿಜ್ಞಾನಿ ಬಿ.ಆರ್.ಗುರುಪ್ರಸಾದ್ ಮಾಹಿತಿ ನೀಡಿದರು.
ಬಾಹ್ಯಾಕಾಶದಲ್ಲಿ ನಿವೇಶನಗಳಿವೆ...!
‘ರಾಜಕಾರಣಿಗಳು ಒಂದು ಮಾರ್ಗದ ಟಿಕೆಟ್ ಪಡೆದು ಬಾಹ್ಯಾಕಾಶಕ್ಕೆ ಹೋಗಬಹುದು. ಅಲ್ಲಿ ಬೇಕಾದಷ್ಟು ನಿವೇಶನಗಳಿವೆ. ಅವುಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಬಹುದು’ ಎಂದು ಯು. ಆರ್.ರಾವ್ ಹಾಸ್ಯಮಿಶ್ರಿತ ಧ್ವನಿ ಯಲ್ಲಿ ಹೇಳಿದಾಗ ಸಭಾಂಗಣ ದಲ್ಲಿ ನಗೆಯ ಬುಗ್ಗೆ ಎದ್ದಿತು.
‘ಹೆಚ್ಚಿನ ಅಧ್ಯಯನ ನಡೆಸಲು ಬಾಹ್ಯಾಕಾಶ ಯಾನ ಕೈಗೊಳ್ಳ ಬೇಕು ಎಂದು ಎಂ.ಎಸ್ಸಿ ಓದುವಾಗ ಹೇಳಿದ್ದರೆ ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಿದ್ದರು. ಈಗ ನೋಡಿ ಎಷ್ಟೊಂದು ಅಭಿವೃದ್ಧಿಯಾಗಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.