ಬೆಂಗಳೂರು: ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕರಾವಳಿ ಭಾಗದ ಸಂಸ್ಕೃತಿ, ಆಚರಣೆಗಳನ್ನು ಪ್ರಚುರಪಡಿಸಲು ಜಯನಗರದ ಶಾಲಿನಿ ಕ್ರೀಡಾಂಗಣದಲ್ಲಿ ಜ.31 ಮತ್ತು 1ರಂದು ಎರಡು ದಿನಗಳ ಕಾಲ ‘ನಮ್ಮೂರ ಹಬ್ಬ– 2015’ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಪರವಾಗಿ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು, ‘ಉತ್ಸವದಲ್ಲಿ ಕರಾವಳಿ ಪ್ರದೇಶದ ಯಕ್ಷಗಾನ, ಬಯಲಾಟ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.
‘ಅಭಿನಂದನ ತಂಡದಿಂದ ಸಂಗೀತದ ವಿಶೇಷ ಪ್ರಯೋಗಗಳು ಮತ್ತು ಕರಾವಳಿ ಮೂಲದ ಅಂತರರಾಷ್ಟ್ರೀಯ ಕಲಾವಿದರಿಂದ ಗಾನಸುಧೆ ಕಾರ್ಯಕ್ರಮ ನಡೆಯಲಿದೆ’ ಎಂದರು. ಟ್ರಸ್ಟ್ ನೀಡುವ ‘ಕಿರೀಟ’ ಪ್ರಶಸ್ತಿಗೆ ಹಿರಿಯ ನಟಿ ಲೀಲಾವತಿ ಮತ್ತು ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ ಅವರು ಭಾಜನರಾಗಿದ್ದಾರೆ’ ಎಂದು ಹೇಳಿದರು.