ನವದೆಹಲಿ (ಪಿಟಿಐ): ಉದ್ಯಮಿಗಳ ಪರ ಲಾಬಿ ನಡೆಸುತ್ತಿದ್ದ ನೀರಾ ರಾಡಿಯಾ ದೂರವಾಣಿ ಕದ್ದಾಲಿಕೆ ಪ್ರಕರಣದ ಪ್ರಾಥಮಿಕ ತನಿಖೆಗೆ ಸಂಬಂಧಿಸಿ ಟಾಟಾ ಸನ್ಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ರತನ್್ ಟಾಟಾ ಹಾಗೂ ಈಗಿನ ಅಧ್ಯಕ್ಷ ಸೈರಸ್್ ಮಿಸ್ತ್ರಿ ಅವರನ್ನು ಸಿಬಿಐ ಪ್ರಶ್ನಿಸಲಿದೆ.
‘ತನಿಖಾ ಸಂಸ್ಥೆ ದಾಖಲಿಸಿರುವ ಎರಡು ಪ್ರಕರಣಗಳಲ್ಲಿ ಟಾಟಾ ಸಮೂಹವನ್ನು ಹೆಸರಿಸಲಾಗಿದೆ. ಟಾಟಾ ಹಾಗೂ ಮಿಸ್ತ್ರಿ ಅವರಿಂದ ಶೀಘ್ರವೇ ಸ್ಪಷ್ಟನೆ ಕೇಳಲಾಗುತ್ತದೆ’ ಎಂದು ಸಿಬಿಐ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಸನ್ಸ್ ವಕ್ತಾರರು, ‘ನಮಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದಿದ್ದಾರೆ.
ಜವಾಹರ ಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆ (ಜೆಎನ್ಎನ್ಯುಆರ್ಎಂ)ಅಡಿ ತಮಿಳುನಾಡು ಸರ್ಕಾರಕ್ಕೆ ಟಾಟಾ ಮೋಟಾರ್ಸ್ ಬಸ್ಗಳನ್ನು ಒದಗಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿ ಸಿಬಿಐ ಚೆನ್ನೈ ಶಾಖೆ ತನಿಖೆ ನಡೆಸುತ್ತಿದೆ.
‘ಜಾರ್ಖಂಡ್ನ ಸಿಂಗ್ಭೂಮ್ ಜಿಲ್ಲೆಯ ಅಂಕುವಾದಲ್ಲಿ ಟಾಟಾ ಸ್ಟೀಲ್ ಕಂಪೆನಿಗೆ ನೀಡಿದ ಕಬ್ಬಿಣದ ಅದಿರು ಗಣಿ ಗುತ್ತಿಗೆ ಕೂಡ ಸಿಬಿಐ ತನಿಖೆಯಲ್ಲಿದೆ’ ಎಂದು ಮೂಲಗಳು ತಿಳಿಸಿವೆ.
‘ಅಕ್ರಮ ನಡೆದಿರುವುದು ಕಂಡುಬಂದಿಲ್ಲ. ರಾಡಿಯಾ ದೂರವಾಣಿ ಸಂಭಾಷಣೆಯಲ್ಲಿ ಈ ಗುತ್ತಿಗೆಗಳ ಪ್ರಸ್ತಾಪವಿದೆ. ಆದ್ದರಿಂದ ಕೆಲವು ವಿಷಯಗಳಿಗೆ ಸಂಬಂಧಿಸಿ ಟಾಟಾ ಹಾಗೂ ಮಿಸ್ತ್ರಿ ಅವರಿಂದ ಸ್ಪಷ್ಟನೆ ಕೇಳಲಾಗುತ್ತದೆ. ಸುದ್ದಿವಾಹಿನಿಯೊಂದರ ಪ್ರತಿನಿಧಿ ಹಾಗೂ ಪ್ರಮುಖ ಪತ್ರಿಕೆಯೊಂದರ ಕಾರ್ಯನಿರ್ವಹಣಾಧಿಕಾರಿಯನ್ನು ಈಗಾಗಲೇ ಪ್ರಶ್ನಿಸಲಾಗಿದೆ. ಅಲ್ಲದೇ, ರಿಲಯನ್ಸ್, ಯುನಿಟೆಕ್, ಟಾಟಾ ಮೋಟಾರ್ಸ್ ಕಾರ್ಯನಿರ್ವಹಣಾಧಿಕಾರಿಗಳನ್ನೂ ಪ್ರಶ್ನಿಸಲಾಗಿದೆ’ ಎಂದು ಮೂಲಗಳು ಹೇಳಿವೆ.