ಬೆಂಗಳೂರು: ವರ್ತಕರು ಖರೀದಿ ಮತ್ತು ಮಾರಾಟ ವಿವರವನ್ನು ದಾಖಲು ಮಾಡಲು ನಿರ್ದಿಷ್ಟ ಕಂಪೆನಿಯ ಸಾಫ್ಟ್ವೇರ್ ಬಳಸಬೇಕೆಂದು ನಿಗದಿ ಮಾಡುವ ಮೂಲಕ ಹಣಕಾಸು ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
‘ವಾಣಿಜ್ಯ ತೆರಿಗೆ ಇಲಾಖೆಯ ‘ಖರೀದಿ ಮತ್ತು ಮಾರಾಟ ವಿವರದ ಇ–ದಾಖಲು’ ಪ್ರಕ್ರಿಯೆಯಲ್ಲಿ ‘ಟ್ಯಾಲಿ’ ಕಂಪೆನಿಯ ಸಾಫ್ಟ್ವೇರ್ ಮಾತ್ರ ಬಳಸುವಂತೆ ವರ್ತಕರಿಗೆ ಮಿತಿ ಹೇರಲಾಗಿದೆ. ಈ ನಿರ್ಧಾರದ ಹಿಂದೆ ಭ್ರಷ್ಟಾಚಾರ ನಡೆದಿದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ.ಭಾಸ್ಕರ್ ರಾವ್ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಅವರು ಆರೋಪಿಸಿದ್ದಾರೆ. ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ವಾಣಿಜ್ಯ ತೆರಿಗೆ ಆಯುಕ್ತ ಅಜಯ್ ಸೇಠ್ ಮತ್ತು ಮುರಳಿ ಕೃಷ್ಣಪ್ಪ ಅಕ್ರಮವಾಗಿ ಇಂತಹ ಆದೇಶ ಹೊರಡಿಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ದೂರನ್ನು ಪೊಲೀಸ್ ವಿಭಾಗಕ್ಕೆ ವರ್ಗಾಯಿಸಿರುವ ಲೋಕಾಯುಕ್ತರು, ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಲೋಕಾಯುಕ್ತರ ಸೂಚನೆಯಂತೆ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.