ಬೆಂಗಳೂರು: ಕೆಂಪೇಗೌಡನಗರ ಪೊಲೀಸರು ಪ್ರದೀಪ್ ಅವರನ್ನು ವಶಕ್ಕೆ ತೆಗೆದುಕೊಂಡ ನಂತರ ಠಾಣೆಗೆ ಬಂದಿದ್ದ ತಂದೆ ಈರಣ್ಣ, ಮಗನ ವಿರುದ್ಧ ದೂರು ದಾಖಲಿಸದಂತೆ ಮನವಿ ಮಾಡಿದ್ದ ದೃಶ್ಯಾವಳಿಯನ್ನು ಒಳಗೊಂಡ ಸಿ.ಡಿ ಮಾಧ್ಯಮಗಳಿಗೆ ಲಭ್ಯವಾಗಿದೆ.
ದೂರು ನೀಡಿದ್ದ ದಂಪತಿ ಮತ್ತು ಈರಣ್ಣ ಅವರ ನಡುವೆ ಠಾಣೆಯಲ್ಲಿ ಸುಮಾರು ನಾಲ್ಕೈದು ನಿಮಿಷ ಸಂಧಾನ ಮಾತುಕತೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದನ್ನು ಇನ್ಸ್ಪೆಕ್ಟರ್ ನಾಗರಾಜ್ ಅವರು ಸಿಬ್ಬಂದಿಯಿಂದ ಚಿತ್ರೀಕರಣ ಮಾಡಿಸಿದ್ದರು.
ಸಿ.ಡಿಯಲ್ಲಿರುವ ಸಂಭಾಷಣೆ: ‘ಬಾಡಿಗೆಗಿದ್ದ ದಂಪತಿಯ ಜತೆ ಜಗಳವಾಡಿದ್ದ ಮಗ, ನನಗೆ ಕರೆ ಮಾಡಿ ಮನೆ ಖಾಲಿ ಮಾಡಿಸುವಂತೆ ಕೂಗಾಡಿದ್ದ. ಅಲ್ಲದೇ, ದಂಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಮದ್ಯವ್ಯಸನಿಯಾದ ಆತ ಮನೆಯನ್ನೇ ಬಾರ್ ಮಾಡಿಕೊಂಡಿದ್ದ. ಮದ್ಯದ ಬಾಟಲಿಗಳನ್ನು ಮನೆಯ ತುಂಬೆಲ್ಲಾ ಎಸೆಯುತ್ತಿದ್ದ ಆತ, ಆ ಬಗ್ಗೆ ಪ್ರಶ್ನಿಸಿದರೆ ನನ್ನೊಂದಿಗೂ ಜಗಳವಾಡುತ್ತಿದ್ದ. ಈ ಕಾರಣಕ್ಕಾಗಿ ನಾನು ಪ್ರತ್ಯೇಕವಾಗಿ ವಾಸವಾಗಿದ್ದೇನೆ’ ಎಂದು ಈರಣ್ಣ ಅವರು ಸಂಧಾನದ ವೇಳೆ ಹೇಳಿಕೆ ಕೊಟ್ಟಿದ್ದರು.