ಕನಕಪುರ: ಡೆಂಗಿ ಸೋಂಕಿತ ಸೊಳ್ಳೆಯ ಕಚ್ಚುವಿಕೆಯಿಂದ ಉಲ್ಬಣ ವಾಗುವ ಡೆಂಗಿ ಜ್ವರ ಬರದಂತೆ ತಡೆಗಟ್ಟಲು, ಮುಂಜಾಗೃತ ಕ್ರಮ ಗೊಳ್ಳಬೇಕಿದ್ದು ಅದಕ್ಕೆ ಸಾರ್ವಜನಿಕರ ಸಹಕಾರ ಅತಿಮುಖ್ಯವಾಗಿ ಬೇಕಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ.ಕುಮಾರ್ ಮನವಿ ಮಾಡಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ತಾಲ್ಲೂಕು ಆಡಳಿತ, ತಾಲ್ಲೂಕು ಆರೋಗ್ಯಾಧಿಕಾರಿ, ವಿವಿಧ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಆಚರಣೆ ಮಾಡಿದ ಡೆಂಗಿ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿದರು.
ಮನೆಯ ಸುತ್ತಮುತ್ತಲ ವಾತಾವರಣ ಚೆನ್ನಾಗಿ ಇಟ್ಟಿಕೊಳ್ಳಬೇಕು, ನೀರು ನಿಲ್ಲದಂತೆ ಎಚ್ಚರವಹಿಸಬೇಕೆಂದು ಮಾಹಿತಿ ನೀಡಿದರು.
ಈಗಾಗಲೇ ತಾಲೂಕಿನ ಗಡಿ ಪ್ರದೇಶವಾದ ಕೊಳೊಂಡನಹಳ್ಳಿ, ಉಯ್ಯಂಬಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಆರೋಗ್ಯ ತಪಾಸಣೆ ನಡೆಸಿದಾಗ ಕೊಳ್ಳಗೊಂಡನಹಳ್ಳಿ ನಾಲ್ವರು ಕ್ಯಾನ್ಸರ್ ಪೀಡಿತರು ಪತ್ತೆಯಾಗಿದ್ದಾರೆ. ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯ ಅರಿವು ಮೂಡಿಸಬೇಕಾಗಿದೆ ಎಂದರು.
ಲಯನ್ಸ್ ಸಿಲ್ಕ್ ಸಿಟಿ ಆಫ್ ಕನಕಪುರದ ಅಧ್ಯಕ್ಷ ಟಿ.ನಾರಾಯಣ್ ಮಾತನಾಡಿ, ಡೆಂಗಿ ದಿನಾಚರಣೆಯ ಎಂದು ಆಚರಿಸುತ್ತಿರುವುದು ಸರಿಯಲ್ಲ ಇದರ ಬದಲಿಗೆ ಪೊಲೀಯೊ ನಿರ್ಮೂಲನಾ ದಿನ ಎಂದು ಆಚರಿಸುವಂತೆ ಡೆಂಗಿ ನಿರ್ಮೂಲನಾ ದಿನ ಎಂದು ಆಚರಿಸುವುದು ಒಳ್ಳೆಯದು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಸಾರ್ವಜನಿಕರಲ್ಲಿ ಡೆಂಗಿ ಜ್ವರದ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲು ತಾಲ್ಲೂಕು ಪಂಚಾಯತಿ ಸಿದ್ಧವಿದೆ ಎಂದು ಕಾಂಗ್ರೆಸ್ ಮುಖಂಡ ಸುರೇಶ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷ ಮರಿಯಪ್ಪ, ಡಾ.ರಾಜು, ಡಾ.ಮಂಜುನಾಥ್, ನಗರ ಸಭೆ ಅಧ್ಯಕ್ಷ ಅಮೀರ್ಖಾನ್, ಪರಿಸರ ಅಭಿಯಂತರೆ ಪಾರ್ವತಿ, ನಾಗರಾಜು ಉಪಸ್ಥಿತರಿದ್ದರು.