ಮೈಸೂರು ಮತ್ತು ಹಾಸನ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ವ್ಯಾಪಕವಾಗಿ ತಂಬಾಕನ್ನು ಬೆಳೆಯಲಾಗುತ್ತಿದೆ. ಇದರ ಎಲೆಗಳನ್ನು ಹದ ಮಾಡಲು ಅಪಾರ ಪ್ರಮಾಣದ ಸೌದೆಯನ್ನು ಸುಡಲಾಗುತ್ತಿದೆ. ಇದರಿಂದ ಮರ, ಅರಣ್ಯಗಳು ಬರಿದಾಗುತ್ತಿವೆ.
ಒಂದು ಕಡೆ ಪೊಟ್ಟಣದ ಮೇಲೆ ‘ತಂಬಾಕು ಸೇವನೆ ಕ್ಯಾನ್ಸರ್ಗೆ ಕಾರಣ’ ಎಂದು ಚಿತ್ರಸಹಿತ ಮುದ್ರಿಸಿ ಮತ್ತೊಂದು ಕಡೆ ಬೆಳೆ ಬೆಳೆಯಲು ಪರವಾನಗಿ ನೀಡುತ್ತಿರುವುದು ಸರ್ಕಾರದ ದ್ವಂದ್ವ ನೀತಿಗೆ ನಿದರ್ಶನ. ವಿದ್ಯಾರ್ಥಿಗಳು ಕದ್ದುಮುಚ್ಚಿ ಬೀಡಿ, ಸಿಗರೇಟು ಸೇದುವಾಗ ಸಿಕ್ಕಿಬೀಳುತ್ತಿದ್ದಾರೆ.
ಸೌದೆ ಸುಡುವುದರಿಂದ ಮತ್ತು ಧೂಮಪಾನದಿಂದ ವಾಯುಮಾಲಿನ್ಯ ಆಗುತ್ತದೆ. ವಾತಾವರಣದ ಉಷ್ಣತೆ ಹೆಚ್ಚಾಗಿ ಮೋಡಗಳು ರೂಪುಗೊಳ್ಳುವುದಿಲ್ಲ. ಇಷ್ಟೇ ಅಲ್ಲದೆ ಮರಗಳು ಖಾಲಿಯಾಗುತ್ತಿರುವುರಿಂದ ನೆರೆಯ ತಾಲ್ಲೂಕುಗಳಲ್ಲಿ ರೂಢಿಯಂತೆ ಮಳೆಯಾಗದೆ ಬರ ಉಂಟಾಗಿದೆ.
ಈ ಸಂದರ್ಭದಲ್ಲಿ ತಂಬಾಕು ಉತ್ಪನ್ನ ನಿಷೇಧಿಸಲು ಸುಪ್ರೀಂಕೋರ್ಟ್, ರಾಜ್ಯದ ಅಭಿಪ್ರಾಯ ಕೇಳಿದೆ. ಇದರ ದುಷ್ಪರಿಣಾಮಗಳನ್ನು ಮನಗಂಡು ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಚಿಂತಿಸಬೇಕಿದೆ.