ನವದೆಹಲಿ (ಪಿಟಿಐ): ರಾಜ್ಯದೆಲ್ಲೆಡೆ ತಲ್ಲಣ ಸೃಷ್ಟಿಸಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಕಾಲಮಿತಿಯೊಳಗೆ ನಡೆಸುವಂತೆ ಕೋರಿದ್ದ ಕರ್ನಾಟಕ ಸರ್ಕಾರದ ಮನವಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ತಿರಸ್ಕರಿಸಿದೆ.
ಅಲ್ಲದೇ, ನೀಡಿದ ಗಡುವಿನೊಳಗೆ ತನಿಖೆ ಪೂರ್ಣಗೊಳಿಸಬೇಕೆಂಬ ನಿಬಂಧನೆಗಳು ಕಾನೂನಿನಲ್ಲಿ ಇಲ್ಲ ಎಂದು ಸಿಬಿಐ ಹೇಳಿದೆ.
ರವಿ ಸಾವಿನ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಳ್ಳುವಂತೆ ಕೋರಿದ್ದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಈ ಸಂಬಂಧ ಮಾಹಿತಿಯನ್ನು ಸೋಮವಾರ ಕಳುಹಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ಈ ಸಂಬಂಧ ಮತ್ತೆ ಮನವಿ ಬಂದಲ್ಲಿ ಕರ್ನಾಟಕದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿರುವ ವಿವಾದಾತ್ಮಕ ಪ್ರಕರಣದ ತನಿಖೆ ನಡೆಸಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಕೋರಿತ್ತು. ಆದರೆ ಈ ಸಂಬಂಧ ಕಾನೂನಿನಲ್ಲಿ ನಿರ್ದಿಷ್ಟ ನಿಬಂಧನೆಗಳಿಲ್ಲ ಎನ್ನುತ್ತವೆ ಮೂಲಗಳು.
ಪ್ರಕರಣವನ್ನು ಸಿಬಿಐಗೆ ವಹಿಸುವಾಗ ರಾಜ್ಯ ಸರ್ಕಾರವು ತನಿಖೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯ ಸರ್ಕಾರದಿಂದ ಮತ್ತೊಂದು ಸ್ಪಷ್ಟನೆ ಕೋರಿದ್ದೇವೆ ಎಂದೂ ಮೂಲಗಳು ಹೇಳಿವೆ.
ಮಾರ್ಚ್ 16ರಂದು ಬೆಂಗಳೂರಿನಲ್ಲಿ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದ ರವಿ ಪ್ರಕರಣವನ್ನು ಕರ್ನಾಟಕ ಸರ್ಕಾರವು ವಿರೋಧ ಪಕ್ಷಗಳ ವ್ಯಾಪಕ ಧರಣಿ ಹಾಗೂ ಜನರ ಪ್ರತಿಭಟನೆಗೆ ಮಣಿದು ಸಿಬಿಐ ತನಿಖೆಗೆ ವಹಿಸಿತ್ತು.
ಇದಕ್ಕೂ ಮುಂಚೆ, ಕರ್ನಾಟಕ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು.