ರಾಮನಾಥಪುರ (ತಮಿಳುನಾಡು), (ಪಿಟಿಐ): ‘ಗುಜರಾತ್ ಅಭಿವೃದ್ಧಿ ಮಾದರಿ ಬಗ್ಗೆ ಮಾತನಾಡುವವರು ತಮಿಳುನಾಡಿಗೆ ಬಂದು ನೋಡಲಿ. ಇಲ್ಲಿನ ಜನ ಯಾರಿಗೂ ಕಮ್ಮಿ ಇಲ್ಲ. ತಾವೇನು ಎನ್ನುವುದನ್ನು ಇಡೀ ಜಗತ್ತಿಗೇ ತೋರಿಸಿದ್ದಾರೆ’ ಎನ್ನುವ ಮೂಲಕ ಸದಾ ಗುಜರಾತ್ ಮಾದರಿ ಬಗ್ಗೆ ಮಾತನಾಡುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೆಣಕಿದ್ದಾರೆ.
ಪಕ್ಷದ ಅಭ್ಯರ್ಥಿ ಎಸ್.ತಿರುನಾವುಕ್ಕರಸರ್ ಪರ ಸೋಮವಾರ ಇಲ್ಲಿ ಪ್ರಚಾರ ಮಾಡಿದ ರಾಹುಲ್, ತಮಿಳುನಾಡಿನ ಅಭಿವೃದ್ಧಿಯನ್ನು ಹಾಡಿ ಹೊಗಳಿದರು.
‘ಮೋದಿ ಇಲ್ಲಿಗೆ ಬಂದು ತಮಿಳುನಾಡು ಅಭಿವೃದ್ಧಿ ನೋಡಲಿ’ ಎಂದು ಸವಾಲು ಹಾಕಿದರು.
ಹೆಚ್ಚಿನ ಸ್ಥಾನ ಗೆಲ್ಲುವ ಭರವಸೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಈ ಸಲ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂಬ ಆತ್ಮವಿಶ್ವಾಸವೂ ರಾಹುಲ್ ಮಾತಿನಲ್ಲಿತ್ತು.
‘ಲೋಕಸಭೆ ಚುನಾವಣೆ ಮಾತ್ರ ನಮ್ಮ ಗುರಿಯಲ್ಲ, ಮುಂದೆ ಈ ರಾಜ್ಯದ ಚುಕ್ಕಾಣಿ ಹಿಡಿಯುವ ಹಂಬಲ ಕಾಂಗ್ರೆಸ್ ಪಕ್ಷಕ್ಕಿದೆ’ ಎಂದು ಹೇಳುವ ಮೂಲಕ ಅವರು, ತಮಿಳುನಾಡಿನಲ್ಲಿ ಕಾಂಗ್ರೆಸ್ ಬೇರುಗಳನ್ನು ಮತ್ತೆ ಗಟ್ಟಿಗೊಳಿಸುವ ಸೂಚನೆ ನೀಡಿದರು.
ಹಿಂದಿನಂತೆ ಕಾಂಗ್ರೆಸ್ ಪಕ್ಷವು ಈ ಬಾರಿ ತಮಿಳುನಾಡಿನಲ್ಲಿ ಪ್ರಮುಖ ದ್ರಾವಿಡ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಎಲ್ಲ 39 ಲೋಕಸಭಾ ಸ್ಥಾನಗಳಿಗೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ.
ಕಾಂಗ್ರೆಸ್ನ ದೀರ್ಘಕಾಲದ ಮಿತ್ರ ಡಿಎಂಕೆ, ಲಂಕಾ ತಮಿಳರ ವಿಷಯವಾಗಿ 2013ರ ಮಾರ್ಚ್ನಲ್ಲಿ ಯುಪಿಎ ಸಖ್ಯ ಕಡಿದುಕೊಂಡಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.