ಕನಕಪುರ: ‘ಕಾವೇರಿ ನದಿಯಲ್ಲಿ ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ನಿರ್ಮಿಸಲು ಮುಂದಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆ ಸಮಂಜಸವಾಗಿದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.
ತಾಲ್ಲೂಕಿನ ಸಂಗಮ್–ಮೇಕೆದಾಟು ಬಳಿ ರಾಜ್ಯ ಸರ್ಕಾರದ ಉದ್ದೇಶಿತ ಕುಡಿಯುವ ನೀರಿನ ಅಣೆಕಟ್ಟು ಯೋಜನೆಯ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸರ್ಕಾರದ ಧೋರಣೆಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಏಪ್ರಿಲ್ 20ರಿಂದ ಸಂಸತ್ನಲ್ಲಿ ಕಲಾಪ ಶುರುವಾಗಲಿದ್ದು, ಅಲ್ಲಿ ಮೇಕೆದಾಟು ಅಣೆಕಟ್ಟು ಬಗ್ಗೆ ಮಾತನಾಡಲು ಜಾಗದ ಬಗ್ಗೆ ಮೊದಲು ತಿಳಿದುಕೊಂಡಿರಬೇಕು. ಇಲ್ಲಿನ ವಸ್ತುಸ್ಥಿತಿ ತಿಳಿದಿದ್ದರೆ ಸಂಸತ್ನಲ್ಲಿ ಮಾತನಾಡಲು ಆತ್ಮಸ್ಥೈರ್ಯ ಬರುತ್ತದೆ. ನಮ್ಮ ರಾಜ್ಯದಿಂದ ಬಿಜೆಪಿಯವರು ಪಕ್ಷದ ನಿರ್ದೇಶನದ ಮೇರೆಗೆ ಮಾತನಾಡಬೇಕು. ಯೋಜನೆ ಬಗ್ಗೆ ರಾಜ್ಯದ ಪರವಾಗಿ ಸದನಕ್ಕೆ ತಿಳಿಸಿಕೊಡ
ಬೇಕಿರುವುದರಿಂದ ಜಾಗ ನೋಡಲು ಬಂದಿರುವುದಾಗಿ ತಿಳಿಸಿದರು.
ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಈ ಭಾಗದಲ್ಲಿ ಪರಿಹರಿಸಲು ರಾಜ್ಯ ಸರ್ಕಾರದ ಮುಂದೆ ಇರುವುದು ಮೇಕೆದಾಟು ಅಣೆಕಟ್ಟೆ ಯೋಜನೆ. ಅದಕ್ಕಾಗಿ ಯೋಜನೆಯ ವರದಿ ಸಿದ್ಧಪಡಿಸಲು ರಾಜ್ಯ ಸರ್ಕಾರವು ₨ 25 ಕೋಟಿ ವೆಚ್ಚದಲ್ಲಿ ವಿದೇಶಿ ಕಂಪೆನಿ
ಯೊಂದಕ್ಕೆ ಟೆಂಡರ್ ನೀಡಿರುವುದಕ್ಕೆ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜಕೀಯ ಪಕ್ಷಗಳು ಆಕ್ಷೇಪಣೆ ಮಾಡಿ ಬಂದ್ ನಡೆಸಿರುವುದು ಸರಿಯಲ್ಲ ಎಂದರು.
ಜೆ.ಡಿ.ಎಸ್. ಮುಖಂಡ ಬಿ.ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡ, ತಾಲ್ಲೂಕು ಅಧ್ಯಕ್ಷ ಸಿದ್ದಮರೀಗೌಡ, ಮುಖಂಡ ಚಿನ್ನಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
* ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ನೆಲ–ಜಲ ವಿಚಾರದಲ್ಲಿ ಒಂದಾಗಿ ಹೋರಾಡುತ್ತವೆ. ನಮ್ಮಲ್ಲಿ ಅಂತಹ ಒಗ್ಗಟ್ಟಿಲ್ಲ. ಎಲ್ಲಾ ಪಕ್ಷಗಳು ಒಗ್ಗೂಡದಿರುವುದು ರಾಜ್ಯದ ಹಿನ್ನಡೆಗೆ ಕಾರಣ.
ಎಚ್.ಡಿ ದೇವೇಗೌಡ, ಜೆಡಿಎಸ್ ಮುಖ್ಯಸ್ಥ