ಧಾರವಾಡ: ‘ಮಾತೃಭಾಷಾ ಮಾಧ್ಯಮ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಬುದ್ಧಿಯ ದುರುಪಯೋಗದಂತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕೈಲಿ ಸುತ್ತಿಗೆ ಹಿಡಿದವರ ಮುಂದೆ ಮಡಿಕೆ ಇಟ್ಟಂತಾಗಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಜನಸಾಹಿತ್ಯ ಸಂಘಟನೆ, ಕೃಷಿ ವಿವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಶನಿವಾರ ಇಲ್ಲಿ ಪ್ರಾರಂಭವಾದ ‘ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ: ರಾಷ್ಟ್ರೀಯ ಚಿಂತನಾ ಶಿಬಿರ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಭಾಷಾ ಅಲ್ಪಸಂಖ್ಯಾತರ ಭಾಷೆಗಳನ್ನು ಮಾತೃಭಾಷೆ ಎಂದು ಸಂವಿಧಾನದಲ್ಲಿ ಕರೆದಿರುವುದನ್ನೇ ನೆಪ ಮಾಡಿಕೊಂಡು ನ್ಯಾಯಾಲಯ ತನ್ನ ಆಟವಾಡಿದೆ. ಅಲ್ಪಸಂಖ್ಯಾತ ಭಾಷಿಕರಿಗೆ ನೀಡಿದ್ದ ರಕ್ಷಣಾ ಆಯುಧದಿಂದಲೇ ಬಹುಭಾಷಿಕರ ಭಾಷೆಗಳ ಕಾಲು ಕತ್ತರಿಸಿರುವುದು ವಿಪರ್ಯಾಸ’ ಎಂದು ವಿಷಾದಿಸಿದರು.
ಉದ್ಘಾಟನಾ ಭಾಷಣ ಮಾಡಿದ ಭೋಪಾಲದ ಪ್ರೊ.ಅನಿಲ ಸದ್ಗೋಪಾಲ, ‘ಮಾತೃಭಾಷೆ ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಇಟ್ಟಿರುವ ದಿಟ್ಟ ಹೆಜ್ಜೆ ಈ ರಾಷ್ಟ್ರದಲ್ಲಿ ಹೊಸ ಹೋರಾಟಕ್ಕೆ ನಾಂದಿಯಾಗಲಿದೆ’ ಎಂದು ಹೇಳಿದರು.
‘ಭಾಷಾ ಚಳವಳಿ, ಮಾತೃಭಾಷಾ ಚಳವಳಿ ಸೇರಿ ಎಲ್ಲಾ ಸುಸ್ಥಿರ ಚಳವಳಿಗಳನ್ನು ಸಮಾನ ಶಿಕ್ಷಣದ ಚಳವಳಿಯೊಂದಿಗೆ ಬೆರೆಸಿ ರೂಪಿಸಿದರೆ ಮಾತ್ರ ಅದು ಯಶಸ್ಸು ಸಾಧ್ಯ’ ಎಂದು ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಪ್ರಸನ್ನ ತಿಳಿಸಿದರು.