ಕೋಲ್ಕತ್ತ (ಪಿಟಿಐ): ಶಾರದಾ ಚಿಟ್ಫಂಡ್ ಹಗರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ವಿಶೇಷ ತನಿಖಾ ತಂಡ ಶುಕ್ರವಾರ ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ರಾಜ್ಯಸಭಾ ಸದಸ್ಯ ಸೃಂಜಯ್ ಬೋಸ್ ಅವರನ್ನು ಐದು ಗಂಟೆಗಳ ತೀವ್ರ ವಿಚಾರಣೆಯ ನಂತರ ಬಂಧಿಸಿದೆ.
ಸೃಂಜಯ್ ಅವರನ್ನು ಶನಿವಾರ ಅಲಿಪುರ್ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಂಗಾಳಿ ದಿನಪತ್ರಿಕೆಯೊಂದರ ಮಾಲೀಕರಾಗಿರುವ ಸೃಂಜಯ್ ಅವರು, ಶಾರದಾ ಸಮೂಹದ ಮುಖ್ಯಸ್ಥ ಸುದೀಪ್ತೊ ಸೆನ್ ಜತೆ ನಡೆಸಿದ ವ್ಯವಹಾರಕ್ಕೆ ಸಂಬಂಧಿಸಿ ಸುದೀರ್ಘ ವಿಚಾರಣೆ ನಡೆಸಿದಾಗ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂತು. ಹಾಗಾಗಿ ಅವರನ್ನು ಬಂಧಿಸಲಾಯಿತು ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಸೆನ್ ಅವರಿಗೆ ಸಿಮೆಂಟ್ ಕಂಪೆನಿಯೊಂದರ ಷೇರುಗಳನ್ನು ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಜವಳಿ ಸಚಿವ ಶ್ಯಾಮಪಾದ ಮುಖರ್ಜಿ ಮತ್ತು ತೃಣಮೂಲ ಕಾಂಗ್ರೆಸ್ನ ಮಾಜಿ ಸಂಸದ ಸೋಮೇನ್ ಮಿತ್ರಾ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಶಾರದಾ ಸಮೂಹ ಮುಖ್ಯಸ್ಥ ಸೆನ್, ತೃಣಮೂಲ ಸಂಸದ ಕುನಾಲ್ ಘೋಷ್ ಮತ್ತು ಪಶ್ಚಿಮ ಬಂಗಾಳದ ಮಾಜಿ ಪೊಲೀಸ್ ಮಹಾ ನಿರ್ದೇಶಕ ರಜತ್ ಮಜುಂದಾರ್ ಬಂಧಿತರಲ್ಲಿ ಪ್ರಮುಖರು.