ನವದೆಹಲಿ(ಪಿಟಿಐ): ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿರುವ ಕಾರಣ ಅವರನ್ನು ಹುದ್ದೆಯಿಂದ ತೆಗೆದು ಹಾಕುವ ಅಧಿಕಾರ ಯಾರಿಗಿದೆ ಎಂಬ ಜಿಜ್ಞಾಸೆ ಆರಂಭವಾಗಿದೆ.
ಯಾವುದೇ ರಾಜ್ಯದ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರನ್ನು ಆ ಹುದ್ದೆಯಿಂದ ತೆಗೆದು ಹಾಕುವ ಅಧಿಕಾರ ಇರುವುದು ರಾಷ್ಟ್ರಪತಿಗೆ ಮಾತ್ರ. ಮಾನವ ಹಕ್ಕುಗಳ ಕಾಯ್ದೆಯ ಸೆಕ್ಷನ್ 23ರ ಪ್ರಕಾರ ರಾಜ್ಯ ಆಯೋಗದ ಮುಖ್ಯಸ್ಥರು ಅಥವಾ ಸದಸ್ಯರ ವಿರುದ್ಧದ ಅನುಚಿತ ವರ್ತನೆ, ಅಸಮರ್ಥತೆ ಆರೋಪ ಸುಪ್ರೀಂಕೋರ್ಟ್ ತನಿಖೆ-ಯಲ್ಲಿ ದೃಢಪಟ್ಟರೆ ವರದಿ ಆಧಾರದ ಮೇಲೆ ರಾಷ್ಟ್ರಪತಿ ಅವರನ್ನು ಹುದ್ದೆಯಿಂದ ಕಿತ್ತು ಹಾಕಬಹುದು.
ಆಯೋಗದ ಮುಖ್ಯಸ್ಥರು ಅಥವಾ ಸದಸ್ಯರ ವಿರುದ್ಧ ದೂರು ಬಂದಲ್ಲಿ ತನಿಖೆ ನಡೆಸಲು ರಾಷ್ಟ್ರಪತಿ ಸುಪ್ರೀಂಕೋರ್ಟ್ಗೆ ಶಿಫಾರಸು ಮಾಡಬಹುದು. ಸುಪ್ರೀಂಕೋರ್ಟ್ ತನಿಖಾ ವರದಿ ಶಿಫಾರಸು ಕೇಂದ್ರ ಸಚಿವ ಸಂಪುಟ ಮುಂದಿನ ಕ್ರಮಕ್ಕಾಗಿ ರಾಷ್ಟ್ರಪತಿಗೆ ಕಳಿಸಿಕೊಡುತ್ತದೆ. ಶಿಫಾರಸಿನ ಆಧಾರದ ಮೇಲೆ ರಾಷ್ಟ್ರಪತಿಗಳು ಆಯೋಗದ ಅಧ್ಯಕ್ಷರು, ಸದಸ್ಯರನ್ನು ಹುದ್ದೆಯಿಂದ ತೆಗೆದು ಹಾಕಬಹುದು.
ಕಾಲಾವಕಾಶ ಕೋರಿಕೆ
ಕೋಲ್ಕತ್ತ (ಪಿಟಿಐ): ರಾಷ್ಟ್ರೀಯ ಮಹಿಳಾ ಆಯೋಗದ ನೋಟಿಸ್ಗೆ ಉತ್ತರಿಸಲು ನ್ಯಾ. ಗಂಗೂಲಿ ಅವರು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದಾರೆ.