ಪಣಜಿ (ಪಿಟಿಐ): ಸಹೋದ್ಯೋಗಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಎದುರಿಸುತ್ತಿರುವ ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜಪಾಲ್, ಗುರುವಾರ ತಮ್ಮ ತಾಯಿ ಭೇಟಿಗೆ ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದಾರೆ.
‘ನನ್ನ ತಾಯಿ ಮಿದುಳು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾರೆ. ಆದ್ದರಿಂದ ನನಗೆ ಅವರನ್ನು ಭೇಟಿಯಾಗಲು ಅನುಮತಿ ಕೊಡಿ’ ಎಂದು ತೇಜಪಾಲ್ ಕೋರಿಕೊಂಡಿದ್ದರು. ಉತ್ತರಗೋವಾದ ಮೊಯಿರಾ ಗ್ರಾಮದಲ್ಲಿರುವ ತಮ್ಮ ತಾಯಿ ಭೇಟಿ ಮಾಡುವುದಕ್ಕೆ ತೇಜಪಾಲ್ ಅವರಿಗೆ ಕೆಲವೊಂದು ಷರತ್ತಿನ ಮೇಲೆ ತ್ವರಿತ ನ್ಯಾಯಾಲಯದ ನ್ಯಾಯಾಧೀಶೆ ವಿಜಯಾ ಪಾಲ್ ಅನುಮತಿ ನೀಡಿದರು.
ಗುರುವಾರ ಒಂದು ತಾಸು ಮಾತ್ರ ಭೇಟಿಗೆ ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ತನಿಖಾಧಿಕಾರಿ ಕೂಡ ಅವರ ಜತೆಗಿರುತ್ತಾರೆ. ಮತ್ತೊಮ್ಮೆ ಭೇಟಿಯಾಗಬೇಕೆಂದರೆ ಹೊಸದಾಗಿ ಮನವಿ ಸಲ್ಲಿಸಬೇಕು ಎಂದೂ ಕೋರ್ಟ್ ಸೂಚಿಸಿದೆ.