ಗೋಣಿಕೊಪ್ಪಲು: ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದಲ್ಲಿ 46ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ಬುಧವಾರ ಜರುಗಿತು. ಈ ಸಭೆ 2014–-15 ನೇ ಸಾಲಿನಲ್ಲಿ ಕೈಗೊಳ್ಳಬೇಕಾದ ಕೃಷಿ ಕಾರ್ಯಕ್ರಮಗಳ ಯೋಜನೆ ಹಾಗೂ 2013ನೇ ಸಾಲಿನ ಪ್ರಗತಿ ವರದಿಯನ್ನು ಮಂಡಿಸಲಾಯಿತು.
ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಬೆಂಗಳೂರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಟಿ. ಮಂಜುನಾಥ ರಾವ್ ಮಾತನಾಡಿ, ಕೊಡಗಿನ ಸುಶಿಕ್ಷಿತ ಕೃಷಿಕರು ಯಾಂತ್ರೀಕರಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಹೇಳಿದರು. ಜಿಲ್ಲೆಯಲ್ಲಿ ತೋಟಗಾರಿಕೆಗೆ ವಿಪುಲ ಅವಕಾಶಗಳಿದ್ದು, ರೈತರು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಉತ್ತಮ ಹಣ್ಣಿನ, ತರಕಾರಿ ಹಾಗೂ ಹೂವಿನ ಬೆಳೆಗಳನ್ನು ಬೆಳೆಯಬಹುದು ಎಂದು ಸಲಹೆ ನೀಡಿದರು.
ವಲಯ ಯೋಜನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿಗಳಾದ ಡಾ.ಬಿ.ಟಿ. ರಾಯುಡು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರ ಜಿಲ್ಲೆಯ ರೈತರಿಗೆ ತಂತ್ರಜ್ಞಾನದ ವರ್ಗಾವಣೆಯಲ್ಲಿ ಅತ್ಯುತ್ತಮ ಸೇವೆ ಒದಗಿಸುತ್ತಿದೆ. ಕೃಷಿಕರು ಯಾವಾಗಲೂ ಕೆವಿಕೆಯ ಸಂಪರ್ಕದಲ್ಲಿ ಇರಬೇಕು ಎಂದು ಹೇಳಿದರು.
ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸಾಜೂ ಜಾಜರ್್ ಮತ್ತು ವಿಷಯ ತಜ್ಞ ಬಿ. ಪ್ರಭಾಕರ್ ಕೇಂದ್ರದಿಂದ ಇದುವರೆಗೆ ನಡೆದಿರುವ ಕಾರ್ಯಕ್ರಮಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸ್ಲೈಡ್ ಶೋ ತೋರಿಸಿ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನೂತನವಾಗಿ ಅಭಿವೃದ್ಧಿಪಡಿಸಿದ ವೆಬ್ಸೈಟ್ ಹಾಗೂ ಕೇಂದ್ರ ಕೈಗೊಂಡ ಆತ್ಮಾ ಚಟುವಟಿಕೆಗಳ ತಾಂತ್ರಿಕ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.
ವಿಜ್ಞಾನಿಗಳಾದ ಡಾ.ಸುಲ್ಲದ್ಮಠ್, ಡಾ.ಪಿ.ಸಿ. ತ್ರಿಪಾಠಿ, ಡಾ.ಎಲ್.ಬಿ. ನಾಯಕ್, ಡಾ.ಧನಂಜಯ, ಡಾ. ಕರುಣಾಕರನ್, ಡಾ.ಲೋಗನಂದನ್ ಮುಂತಾದ ವಿಜ್ಞಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರದ ವಿಷಯ ತಜ್ಞ ವೀರೇಂದ್ರ ಕುಮಾರ್, ಪದ್ಮಾವತಿ ಮುಂತಾದವರು ಹಾಜರಿದ್ದರು.