ನವದೆಹಲಿ (ಪಿಟಿಐ): ಆಗಸ್ಟಾವೆಸ್ಟ್ಲ್ಯಾಂಡ್್ ಹೆಲಿಕಾಪ್ಟರ್್ ಖರೀದಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇಡಿ) ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಹಾಗೂ ಇತರರ ವಿರುದ್ಧ ಅಕ್ರಮ ಹಣ ಚಲಾವಣೆ ಪ್ರಕರಣ ದಾಖಲಿಸಿದೆ.
ವಿದೇಶಿ ವಿನಿಮಯ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ಈ ಮೊದಲು ಪ್ರಕರಣ ದಾಖಲಿಸಿತ್ತು.
ಅತಿಗಣ್ಯರ ಬಳಕೆಗಾಗಿ 12 ಹೆಲಿಕಾಪ್ಟರ್ಗಳನ್ನು ಖರೀದಿಸುವ ವಾಯುಪಡೆ ಯೋಜನೆಯಲ್ಲಿ ಆಗಸ್ಟಾವೆಸ್ಟ್ಲ್ಯಾಂಡ್, ತನ್ನ ಜತೆ ₨ 3,600 ಕೋಟಿ ವ್ಯವಹಾರ ಕುದುರಿಸಲು ಆಗ ವಾಯುಪಡೆ ಮುಖ್ಯಸ್ಥರಾಗಿದ್ದ ಎಸ್.ಪಿ.ತ್ಯಾಗಿ ಹಾಗೂ ಅವರ ಸಂಬಂಧಿಗಳಿಗೆ ಮಧ್ಯವರ್ತಿಗಳ ಮೂಲಕ ₨362 ಕೋಟಿ ಲಂಚ ನೀಡಿದೆ ಎಂಬ ಆರೋಪ ಇದೆ. ಲಂಚಕ್ಕೆ ಬಳಸಿದ ‘ಅಕ್ರಮ ಹಣ’ದ ಮೂಲ ಪತ್ತೆ ಮಾಡುವುದು ಜಾರಿ ನಿರ್ದೇಶನಾಲಯದ ಉದ್ದೇಶವಾಗಿದೆ. ಹಾಗಾಗಿ ತ್ಯಾಗಿ ಮತ್ತಿತರರ ವಿರುದ್ಧ ಅಕ್ರಮ ಹಣ ಚಲಾವಣೆ ಪ್ರಕರಣ ದಾಖಲಿಸಿದೆ.
ಸಿಬಿಐ ದೂರನ್ನು ಪರಿಗಣಿಸಿ ಜಾರಿ ನಿರ್ದೇಶನಾಲಯವು ತ್ಯಾಗಿ, ಅವರ ಕುಟುಂಬ ಸದಸ್ಯರು, ಯೂರೋಪ್ ಪ್ರಜೆಗಳಾದ ಕಾರ್ಲೊ ಗೆರೊಸಾ, ಕ್ರಿಶ್ಚಿಯನ್್ ಮೈಕೆಲ್, ಗೈಡೊ ಹಶ್ಕೆ ಮತ್ತು ಇಟಲಿ ಮೂಲದ ಫಿನ್ಮೆಕಾನಿಕಾ, ಬ್ರಿಟನ್ನ ಆಗಸ್ಟಾವೆಸ್ಟ್ಲ್ಯಾಂಡ್್ ಹಾಗೂ ಚಂಡೀಗಡ ಮೂಲದ ಐಡಿಎಸ್ ಇನ್ಫೊಟೆಕ್್ ಮತ್ತು ಏರೊಮ್ಯಾಟ್ರಿಕ್ಸ್ ವಿರುದ್ಧ ಆರೋಪ ದಾಖಲಿಸಿದೆ.
ಗೋವಾ ರಾಜ್ಯಪಾಲರ ಹೇಳಿಕೆ ದಾಖಲು: ಗೋವಾ ರಾಜ್ಯಪಾಲ ಬಿ.ವಿ.ವಾಂಚೂ ಅವರನ್ನು ಈ ಪ್ರಕರಣದ ಸಾಕ್ಷಿಯಾಗಿ ಪರಿಗಣಿಸಿರುವ ಸಿಬಿಐ, ಅವರಿಂದ ಶುಕ್ರವಾರ ಹೇಳಿಕೆ ದಾಖಲಿಸಿಕೊಂಡಿದೆ.
2005ರಲ್ಲಿ ನಡೆದ ಸಭೆಯಲ್ಲಿ, ಹೆಲಿಕಾಪ್ಟರ್ಗಳು ಹಾರಾಡುವ ಗರಿಷ್ಠ ಎತ್ತರದ ಮಿತಿಯನ್ನು 18,000 ಅಡಿಯಿಂದ 15,000 ಅಡಿಗೆ ಇಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದರಿಂದಾಗಿಯೇ ಟೆಂಡರ್ ಪ್ರಕ್ರಿಯೆಯಲ್ಲಿ ಆಗಸ್ಟಾವೆಸ್ಟ್ಲ್ಯಾಂಡ್ ಪಾಲ್ಗೊಳ್ಳಲು ಸಾಧ್ಯವಾಯಿತು. ಈ ಸಭೆಯಲ್ಲಿ ವಾಂಚೂ ಕೂಡ ಇದ್ದರು ಎಂಬ ಕಾರಣಕ್ಕೆ ತನಿಖಾ ಸಂಸ್ಥೆ ಇವರನ್ನು ಪ್ರಶ್ನಿಸಿದೆ.
ರಾಜೀನಾಮೆ: ಸಿಬಿಐನಿಂದ ಪ್ರಶ್ನೆಗೊಳಪಟ್ಟ ಬೆನ್ನಲ್ಲಿಯೇ ಗೋವಾ ರಾಜ್ಯಪಾಲ ಬಿ.ವಿ.ವಾಂಛೂ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್್ ಗೋಸ್ವಾಮಿ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.