ಈ ಕುರಿತಂತೆ ರಾಜ್ಯಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು `ನೇಮಕಾತಿಗೆ (ಸೇನೆಯ ಮುಖ್ಯಸ್ಥರಾಗಿ ಸುಹಾಗ್) ಸಂಬಂಧಿಸಿದಂತೆ ಸರ್ಕಾರದ ಆಯ್ಕೆಯೇ ಅಂತಿಮ ಮತ್ತು ಇದಕ್ಕೆ ಸರ್ಕಾರ ಬದ್ಧವಾಗಿದೆ' ಎಂದು ಹೇಳಿದರು.
ದಲ್ಬೀರ್ ಆಯ್ಕೆ ಕುರಿಂತೆ ಆಕ್ಷೇಪ ಎತ್ತಿರುವ ಈಶಾನ್ಯ ಪ್ರದೇಶಾಭಿವೃದ್ಧಿ ಖಾತೆಯ (ಸ್ವತಂತ್ರ) ಸಚಿವ ಹಾಗೂ ಸೇನೆಯ ಮಾಜಿ ಮುಖ್ಯಸ್ಥ ವಿ.ಕೆ.ಸಿಂಗ್ ಅವರ ನಡೆ ಕುರಿತಂತೆ ಕಾಂಗ್ರೆಸ್ ಹಿರಿಯ ಮುಖಂಡ ಆನಂದ ಶರ್ಮಾ ಅವರು ಟ್ವಿಟ್ ಸಂದೇಶದಲ್ಲಿ ಧ್ವನಿ ಎತ್ತಿದ ಬೆನ್ನಲ್ಲೇ ಜೇಟ್ಲಿ ಅವರಿಂದ ಈ ಹೇಳಿಕೆ ಕೇಳಿ ಬಂದಿದೆ.
ಸೇನೆಯ ಮುಖ್ಯಸ್ಥರಾಗಿರುವ ವಿಕ್ರಂ ಸಿಂಗ್ ಅವರ ಅಧಿಕಾರಾವಧಿಯು ಜುಲೈ 31ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಈ ಮುಂಚಿನ ಯುಪಿಎ ಸರ್ಕಾರ ಕೆಲ ವಾರಗಳ ಹಿಂದೆಯಷ್ಟೇ ದಲ್ಬೀರ್ ಅವರನ್ನು ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕಾತಿ ಮಾಡಿತ್ತು.