ಬೆಂಗಳೂರು: ನಾಡಹಬ್ಬ ದಸರಾ ಉದ್ಘಾಟನೆಗೆ ಆಗಮಿಸುವಂತೆ ಕೋರಿ ಸಾಹಿತಿ ಗಿರೀಶ ಕಾರ್ನಾಡ ಅವರಿಗೆ ಬುಧವಾರ ಇಲ್ಲಿ ಸರ್ಕಾರದ ವತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್, ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್, ಮೈಸೂರು ಮೇಯರ್ ಎಂ.ಎನ್. ರಾಜೇಶ್ವರಿ, ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಮತ್ತಿತರರು ಇಲ್ಲಿನ ಕಾರ್ನಾಡರ ಮನೆಗೆ ತೆರಳಿ ಆಹ್ವಾನ ಪತ್ರ ನೀಡಿದರು.
ಇದಕ್ಕೂ ಮುನ್ನ ದಸರಾ ಉಸ್ತುವಾರಿ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾಡಹಬ್ಬಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು.
ಬಿಜೆಪಿ ವಿರೋಧ: ಕಾರ್ನಾಡ ಅವರನ್ನು ದಸರಾ ಉತ್ಸವ ಉದ್ಘಾಟನೆಗೆ ಆಹ್ವಾನಿಸಿದ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯ ಘಟಕ ವಿರೋಧಿಸಿದೆ.
‘ಎಲ್ಲ ರೀತಿಯ ಪೂಜಾ ವಿಧಿಗಳಿಗೆ ಕಾರ್ನಾಡರು ವಿರುದ್ಧವಾಗಿದ್ದಾರೆ. ದಸರಾ ಉದ್ಘಾಟಿಸುವ ವ್ಯಕ್ತಿ ಗಣಪತಿ ಮತ್ತು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಬೇಕಾಗುತ್ತದೆ. ಕಾರ್ನಾಡರು ದೇವರನ್ನು ನಂಬುವವರಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.
‘ದಸರಾ ಉದ್ಘಾಟನೆಗೆ ಇದುವರೆಗೆ ರಾಜಕೀಯೇತರ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತಿತ್ತು. ಆದರೆ ಕಾರ್ನಾಡರು ರಾಜಕೀಯದಲ್ಲಿರುವ ವ್ಯಕ್ತಿ. ಅವರು ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ಕೂಡ ನಡೆಸಿದ್ದಾರೆ’ ಎಂದು ನೆನಪಿಸಿದರು.