ನವದೆಹಲಿ: ಮಂಗಳವಾರ 37ನೇ ವಸಂತಕ್ಕೆ ಕಾಲಿಟ್ಟ ಭಾರತ ತಂಡದ ಸಿಡಿಲಬ್ಬರದ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ನ ಎಲ್ಲ ಮಾದರಿಗಳಿಗೂ ವಿದಾಯ ಹೇಳಿದ್ದಾರೆ.
ಸೋಮವಾರ ರಾತ್ರಿ ದುಬೈನಲ್ಲಿ ಎಂಸಿಎಲ್ ಸಮಾರಂಭದಲ್ಲಿ ತಮ್ಮ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದ ಅವರು, ದೆಹಲಿಗೆ ಬಂದಿಳಿದ ಕೂಡಲೇ ನಿರ್ಧಾರ ಪ್ರಕಟಿಸಿದ್ದಾರೆ. ಅವರು ಹರಿಯಾಣ ಕ್ರಿಕೆಟ್ ಸಂಸ್ಥೆಗೆ ಬರೆದಿರುವ ಪತ್ರದಲ್ಲಿ ವಿದಾಯದ ಬಗ್ಗೆ ಬರೆದಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ನಾನು ಭಾರತ ತಂಡದಲ್ಲಿ ಆಡಿದ ಕಾಲಘಟ್ಟವು ಅತ್ಯಂತ ಮಹತ್ವದ್ದಾಗಿತ್ತು. ಹಲವು ದಿಗ್ಗಜ ಆಟಗಾರರೊಂದಿಗೆ ಆಡುವ ಅದೃಷ್ಟ ನನ್ನದಾಗಿತ್ತು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ವಿ.ವಿ.ಎಸ್. ಲಕ್ಷ್ಮಣ್, ಜಾವಗಲ್ ಶ್ರೀನಾಥ್, ಜಹೀರ್ ಖಾನ್,, ಮಹೇಂದ್ರಸಿಂಗ್ ದೋನಿ, ಯುವರಾಜ್ ಸಿಂಗ್, ಹರಭಜನ್ ಸಿಂಗ್ ಅವರಂತಹ ಮಹಾನ್ ಆಟಗಾರರೊಂದಿಗೆ ಆಡಿದೆ’ ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಎರಡು ತ್ರಿಶತಕ ದಾಖಲಿಸಿದ ಏಕೈಕ ಆಟಗಾರ ಸೆಹ್ವಾಗ್, ಕಳೆದ ಎರಡೂವರೆ ವರ್ಷಗಳಿಂದ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇತ್ತೀಚೆಗೆ ದೆಹಲಿ ತಂಡವನ್ನು ತೊರೆದಿದ್ದ ಅವರು ಹರಿಯಾಣ ರಣಜಿ ತಂಡ ಸೇರಿದ್ದರು.
‘ಸಚಿನ್, ಸುನಿಲ್ ಗಾವಸ್ಕರ್ ಮತ್ತು ಕಪಿಲ್ ದೇವ್ ನನ್ನ ನೆಚ್ಚಿನ ಆಟಗಾರರು. ಅವರನ್ನೇ ನಾನು ಅನುಕರಿಸಿದ್ದೇನೆ. ಅವರ ಆಟವನ್ನು ನೋಡುತ್ತ ಬೆಳೆದ ವನು ನಾನು. ಅವರಿಂದ ಬಹಳಷ್ಟು ಕಲಿತಿದ್ದೇನೆ’ ಎಂದು ‘ನಜಾಫ್ಗಡದ ಸಚಿನ್’ ಸೆಹ್ವಾಗ್ ಹೇಳಿದ್ದಾರೆ.
‘ನನ್ನದೇ ಆದ ಶೈಲಿಯಲ್ಲಿ ನಾನು ಆಡಿದ್ದೇನೆ. ಪ್ರತಿ ಎಸೆತದಲ್ಲಿಯೂ ರನ್ ಗಳಿಸಬೇಕು ಎನ್ನುವುದೇ ನನ್ನ ಮೂಲಮಂತ್ರವಾಗಿತ್ತು. ನಾನು ಯಾವಾಗಲೂ ಸಕಾರಾತ್ಮಕ ಚಿಂತನೆ ಹೊಂದಿದ್ದೇನೆ. ಪ್ರತಿ ಎಸೆತವನ್ನು ಹೊಡೆಯುವುದಷ್ಟೇ ನನಗೆ ಗೊತ್ತಿದ್ದದ್ದು’ ಎಂದು ಹೇಳಿದ್ದಾರೆ.