ನವದೆಹಲಿ (ಪಿಟಿಐ): ಅಮಾನತಿನಲ್ಲಿಟ್ಟಿರುವ ದೆಹಲಿ ವಿಧಾನಸಭೆಯನ್ನು ವಿಸರ್ಜಿಸದಂತೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ಆಮ್ ಆದ್ಮಿ ಪಕ್ಷ (ಎಎಪಿ) ಮನವಿ ಮಾಡಿದೆ.
ಮಂಗಳವಾರ ಜಂಗ್ ಅವರನ್ನು ಭೇಟಿಯಾದ ಎಎಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಸಂಬಂಧ ಪತ್ರ ಸಲ್ಲಿಸಿದರು.
ಮತ್ತೆ ಸರ್ಕಾರ ರಚಿಸಬೇಕೇ ಎಂಬ ಬಗ್ಗೆ ರಾಜ್ಯದೆಲ್ಲೆಡೆ ಸಾರ್ವಜನಿಕ ಸಭೆಗಳನ್ನು ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಲು ಕಾಲಾವಕಾಶ ಬೇಕೆಂದು ಜಂಗ್ ಅವರಿಗೆ ಎಎಪಿ ಪತ್ರದಲ್ಲಿ ಕೋರಿದೆ.
ಜಂಗ್ ಜತೆ ಸುಮಾರು ಅರ್ಧ ಗಂಟೆ ನಡೆದ ಸಭೆಯಲ್ಲಿ ಎಎಪಿ ಮುಖಂಡ ಮನೀಶ್ ಸಿಸೋಡಿಯ ಸಹ ಇದ್ದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲನುಭವಿಸಿದ ಕಾರಣ ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲ ಪಡೆದು ಸರ್ಕಾರ ರಚಿಸಬೇಕು ಎಂದು ಕೆಲವು ಎಎಪಿ ಶಾಸಕರು ಇತ್ತೀಚೆಗೆ ಒತ್ತಾಯಿಸಿದ್ದರು.
ಎಎಪಿ ಮೂಲಗಳ ಪ್ರಕಾರ, ಪಕ್ಷದ ಬಹುತೇಕ ಶಾಸಕರು ತಕ್ಷಣವೇ ಹೊಸದಾಗಿ ಚುನಾವಣೆ ಎದುರಿಸುವುದಕ್ಕೆ ವಿರೋಧವಿದ್ದು, ಈಗ ‘ಮೋದಿ ಅಲೆ’ ಇರುವುದರಿಂದ ಚುನಾವಣೆ ನಡೆದರೆ ತಾವು ಗೆದ್ದು ಬರುವುದು ಕಷ್ಟ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ.