ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆ ಗುಡುಗು ಮಿಂಚು ಮತ್ತು ಆಲಿಕಲ್ಲು ಸಹಿತ ಸುರಿದು ಅವಾಂತರ ಸೃಷ್ಟಿಸಿದ್ದ ಮಳೆ ಶುಕ್ರವಾರ ರಾತ್ರಿಯೂ ಧಾರಾಕಾರವಾಗಿ ಸುರಿಯಿತು.
ರಾತ್ರಿ 10.30ಕ್ಕೆ ಆರಂಭವಾದ ಮಳೆ 12 ಗಂಟೆವರೆಗೂ ಸುರಿಯಿತು. ಚಾಮರಾಜಪೇಟೆ, ಜಯನಗರ, ಶಾಂತಿನಗರ, ವಿಜಯನಗರ, ರಾಜಾಜಿನಗರ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಸ್ತೂರಬಾ ರಸ್ತೆ, ಶಿವಾಜಿನಗರ, ಆರ್.ಟಿ.ನಗರ, ಇಂದಿರಾನಗರ, ಕೋರಮಂಗಲ, ಹೊಸೂರು ರಸ್ತೆ , ಸೇರಿದಂತೆ ನಗರದ ಹಲವೆಡೆ ಮಳೆಯಾಯಿತು.
ಮಳೆಯಿಂದಾಗಿ ಜಯನಗರ 4ನೇ ಹಂತದ 10ನೇ ಮುಖ್ಯರಸ್ತೆ, ಜೆ.ಸಿ.ರಸ್ತೆಯ ಪೂರ್ಣಿಮಾ ಚಿತ್ರಮಂದಿರ ಮತ್ತು ಸಿದ್ದಾಪುರ ಸಮೀಪದ ಸೋಮೇಶ್ವರ ನಗರದಲ್ಲಿ ಮರಗಳು ನೆಲಕ್ಕುರುಳಿದ್ದರಿಂದ ಸಂಚಾರಕ್ಕೆ ಅಡಚಣೆಯಾಯಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.
ಮಾಗಡಿ ರಸ್ತೆ, ವಿಲ್ಸನ್ಗಾರ್ಡನ್, ಆಡುಗೋಡಿ, ಸುಧಾಮನಗರ, ಶಾಂತಿನಗರ, ಶ್ರೀರಾಂಪುರದ ಅನೇಕ ಮನೆಗಳಿಗೆ ನೀರು ನುಗ್ಗಿತ್ತು. ಮನೆಯೊಳಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಜನರು ಹರಸಾಹಸ ಪಡಬೇಕಾಯಿತು.
‘ರಾತ್ರಿ 12 ಗಂಟೆವರೆಗೆ ನಗರದ ಒಳಭಾಗದಲ್ಲಿ 33 ಮಿ.ಮೀ ಮತ್ತು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 0.6 ಮಿ.ಮೀ ಮಳೆಯಾಗಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.