ಬೆಂಗಳೂರು: ರಾಘವೇಶ್ವರ ಶ್ರೀ ಸ್ವಾಮೀಜಿ ವಿರುದ್ಧ ನಕಲಿ ಸಿ.ಡಿ ಮತ್ತು ಕರಪತ್ರ ಹಂಚುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಚಾರಣೆಯಿಂದ ಹಿಂದೆ ಸರಿದಿರುವುದನ್ನು ಸಾಕೇತ ಸೇನೆ ಖಂಡಿಸಿದೆ.
‘ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿರುವಾಗ ರಾಜ್ಯ ಸರ್ಕಾರ ಹಿಂದೆ ಸರಿಯುವುದು ಸರಿಯಲ್ಲ. ನಕಲಿ ಸಿಡಿ ಮತ್ತು ಕರಪತ್ರ ಹಂಚುವ ಸಂದರ್ಭದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗಿತ್ತು. ಅಲ್ಲದೆ ನಕಲಿ ಸಿಡಿ ತಯಾರಿಸಲು ಬಳಸಲಾಗಿದ್ದ ಎಲ್ಲ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣದ ತನಿಖೆಗೆ ವಿಶೇಷ ತಂಡವನ್ನೂ ರಚಿಸಲಾಗಿತ್ತು. ನ್ಯಾಯಾಲಯದಲ್ಲಿ ವಾದ ಮಾಡಲು ವಿಶೇಷ ಅಭಿಯೋಜಕನ್ನೂ ನೇಮಿಸ ಲಾಗಿತ್ತು. ಆರೋಪಿಗಳಿಗೆ ಜಾಮೀನು ಲಭ್ಯವಾಗಿರಲಿಲ್ಲ. ಆದರೂ ರಾಜ್ಯ ಸರ್ಕಾರ ಏಕಾಏಕಿ ಪ್ರಕರಣದಿಂದ ಹಿಂದೆ ಸರಿದಿದೆ. ರಾಮಚಂದ್ರಾಪುರ ಮಠದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಏನು ಬೇಕು’ ಎಂದು ಅದು ಪ್ರಶ್ನೆ ಮಾಡಿದೆ.