ನವದೆಹಲಿ (ಪಿಟಿಐ): ನಕ್ಸಲರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಆದರೆ ಮಾವೋವಾದಿ ನಕ್ಸಲರ ಹಿಂಸೆಯನ್ನು ತಡೆಯುವುದಕ್ಕಾಗಿ ಸಂಬಂಧಪಟ್ಟ ರಾಜ್ಯಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕೆಲಸ ಮಾಡಲಾಗುವುದು ಎಂದು ತಿಳಿಸಿದೆ.
ನಕ್ಸಲ್ ಪೀಡಿತ ಹತ್ತು ರಾಜ್ಯಗಳ ಆಡಳಿತ ಮತ್ತು ಪೊಲೀಸ್ ಮುಖ್ಯಸ್ಥರ ಜೊತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಭೆ ನಡೆಸಿದರು. ಪೊಲೀಸ್ ಪಡೆಗೆ ಸಾಕಷ್ಟು ಸಲಕರಣೆಗಳನ್ನು ಖರೀದಿಸಲು ಮತ್ತು ಆಧುನಿಕಗೊಳಿಸಲು ಸಾಕಷ್ಟು ಅನುದಾನ ಒದಗಿಸಲಾಗುವುದು ಎಂದು ಸಿಂಗ್ ಭರವಸೆ ನೀಡಿದರು.
ಸರ್ಕಾರದ ಅಸ್ತಿತ್ವಕ್ಕೆ ಮಾವೋವಾದಿಗಳು ಸವಾಲೆಸೆದರೆ ಸೂಕ್ತ ಉತ್ತರ ನೀಡುವಂತೆಯೂ ಅವರು ಸೂಚಿಸಿದರು. ‘ಯಾವುದೇ ಮಾತುಕತೆಯ ಪ್ರಶ್ನೆಯೇ ಇಲ್ಲ. ನಾವು ಸಮತೋಲಿತ ಧೋರಣೆಯನ್ನು ಅನುಸರಿಸುತ್ತೇವೆ. ನಕ್ಸಲರು ದಾಳಿ ನಡೆಸಿದರೆ ಸೂಕ್ತ ಉತ್ತರ ನೀಡುತ್ತೇವೆ’ ಎಂದು ಉನ್ನತ ಮಟ್ಟದ ಸಭೆಯ ಬಳಿಕ ರಾಜನಾಥ್ ಸಿಂಗ್ ಹೇಳಿದರು.
ನಕ್ಸಲ್ ಹಿಂಸೆಗೆ ಒಳಗಾದ ರಾಜ್ಯಗಳ ಪೊಲೀಸ್ ಮುಖ್ಯಸ್ಥರು ಇದೇ ಮೊದಲ ಬಾರಿ ಕೇಂದ್ರ ಗೃಹ ಸಚಿವರಿಗೆ ಪರಿಸ್ಥಿತಿಯ ಮಾಹಿತಿ ನೀಡಿದರು. ಸಿಂಗ್ ಅವರು ಎನ್ಡಿಎ ಸರ್ಕಾರದ ಆದ್ಯತೆಗಳನ್ನು ಅಧಿಕಾರಿಗಳಿಗೆ ವಿವರಿಸಿದರು.
ನಕ್ಸಲರು ಹಿಂಸೆಯನ್ನು ತ್ಯಜಿಸಿದರೆ ಮಾತ್ರ ಸರ್ಕಾರ ಮಾತುಕತೆಗೆ ಮುಂದಾಗಲಿದೆ ಎಂದು ಸಭೆಯ ನಂತರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.