ಬೆಂಗಳೂರು: ಸಂಚಾರ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಹಗಲು ವೇಳೆ ಕಮಿಷನರೇಟ್ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಪ್ರವೇಶ ನಿರ್ಬಂಧಿಸಿ ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.
‘ಮೂರು ಟನ್ಗಿಂತಲೂ ಅಧಿಕ ಭಾರ ಹೊರುವ ವಾಹನಗಳಿಗೆ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ವಾಹನಗಳು ರಾತ್ರಿ ಸಮಯದಲ್ಲಿ ಮಾತ್ರ ನಗರದಲ್ಲಿ ಸಂಚರಿಸಬಹುದು. ಅದೇ ರೀತಿ ಹಾಲು, ಔಷಧ, ಅಡುಗೆ ಅನಿಲದ ಸಿಲಿಂಡರ್ ಸೇರಿದಂತೆ ಮತ್ತಿತರ ವಾಹನಗಳ ಸಂಚಾರಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಲಾಗಿದೆ’ ಎಂದು ಎಂ.ಎನ್.ರೆಡ್ಡಿ ಹೇಳಿದರು.
‘ನಿಗದಿತ ಅವಧಿ ಬಳಿಕವೂ ನಗರದಲ್ಲಿ ಈ ವಾಹನಗಳು ಸಂಚರಿಸುವುದಾದರೆ ಪೊಲೀಸರ ಅನುಮತಿ ಪಡೆಯಬೇಕು. ಇದಕ್ಕಾಗಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ನೇತೃತ್ವದಲ್ಲಿ ಏಕ ಗವಾಕ್ಷಿ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಪೂರ್ವ ಮತ್ತು ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿಗಳು ಸದಸ್ಯರಾಗಿರುತ್ತಾರೆ. ಯೋಜನಾ ವಿಭಾಗದ ಎಸಿಪಿ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ವಾಹನಗಳ ಮಾಲೀಕರು ಇಲ್ಲಿ ಮನವಿ ಸಲ್ಲಿಸಿ, ಅನುಮತಿ ಪಡೆಯಬೇಕಾಗುತ್ತದೆ’ ಎಂದರು.
‘ಸರಕು ವಾಹನಗಳಿಂದ ನಗರದಲ್ಲಿ ಹೆಚ್ಚಿನ ದಟ್ಟಣೆ ಉಂಟಾಗುತ್ತಿದೆ. ಅಲ್ಲದೆ ರಸ್ತೆ ಅಪಘಾತಗಳು, ವಾಯು ಹಾಗೂ ಶಬ್ದ ಮಾಲಿನ್ಯಕ್ಕೂ ಈ ವಾಹನಗಳ ಓಡಾಟವೇ ಕಾರಣ’ ಎಂದು ಸಂಚಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಆದೇಶವನ್ನು ಜಾರಿಗೆ ತರಲಾಗಿದೆ. ಈ ಆದೇಶ ಇಂದಿನಿಂದಲೇ ಜಾರಿಯಾಗಿದ್ದು, ಭಾರಿ ವಾಹನಗಳು ಹಗಲು ವೇಳೆ ನಗರದಲ್ಲಿ ಸಂಚರಿಸುವಂತಿಲ್ಲ’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.
‘ನಿಗದಿತ ಸಮಯ ಹೊರತುಪಡಿಸಿ ನಗರ ಪ್ರವೇಶಿಸುವ ಸರಕು ಸಾಗಣೆ ವಾಹನಗಳನ್ನು ಜಪ್ತಿ ಮಾಡಲಾಗುವುದು. ಜತೆಗೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ದಂಡವನ್ನೂ ವಿಧಿಸಲಾಗುವುದು’ ಎಂದು ಸಂಚಾರ ವಿಭಾಗದ ಹೆಚ್ಚುವರಿ
ಪೊಲೀಸ್ ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ ನೀಡಿದರು.
*ಹೊಸೂರು ರಸ್ತೆ–ನೈಸ್ ರಸ್ತೆ, ಬೇಗೂರು ರಸ್ತೆ, ಕೌಂಟಿ ರಸ್ತೆ, ಹರಳೂರು ರಸ್ತೆ, ಕಸದನಹಳ್ಳಿ ರಸ್ತೆ, ಚಿಕ್ಕನಾಗಮಂಗಲ, ಗೆಟ್ಟಿಹಳ್ಳಿ ರಸ್ತೆ, ವೀರಸಂದ್ರ ಜಂಕ್ಷನ್
*ಬನ್ನೇರುಘಟ್ಟ ರಸ್ತೆ–ಹೊಸೂರು ರಸ್ತೆ, ತುಮಕೂರು ರಸ್ತೆ–ಬನ್ನೇರುಘಟ್ಟ ರಸ್ತೆ (ನೈಸ್ ರಸ್ತೆ) ಕೋಳಿಫಾರಂ ಗೇಟ್, ಬೇಗೂರು–ಕೊಪ್ಪ ರಸ್ತೆ, ಕನಕಪುರ ರಸ್ತೆ–ಕೊತ್ತನೂರು ದಿಣ್ಣೆ
*ಕನಕಪುರ ರಸ್ತೆ–ನೈಸ್ ರಸ್ತೆ, ತಲಘಟ್ಟಪುರ ರಸ್ತೆ, ಕೆಂಗೇರಿ–ಉತ್ತರಹಳ್ಳಿ ರಸ್ತೆ, ಕೊತ್ತನೂರು ರಸ್ತೆ, ವಡ್ಡರಪಾಳ್ಯ ರಸ್ತೆ, ಅಂಜನಾಪುರ ರಸ್ತೆ, ಕೆಂಬತ್ತಹಳ್ಳಿ, ಹೊಸಕೆರೆಹಳ್ಳಿ, ನೈಸ್ರಸ್ತೆ ಜಂಕ್ಷನ್.
*ಮೈಸೂರು ರಸ್ತೆ–ಕೆಂಗೇರಿ ಚೆಕ್ಪೋಸ್ಟ್, ದೊಡ್ಡಬೆಲೆ ಕ್ರಾಸ್, ತಲಘಟ್ಟಪುರ–ಕೋಡಿಪಾಳ್ಯ, ಉತ್ತರಹಳ್ಳಿ ರಸ್ತೆ, ಕೊಮ್ಮಘಟ್ಟ, ಗಾಣಕಲ್ಲು ರಸ್ತೆ
*ಮಾಗಡಿ ರಸ್ತೆ–ಸುಂಕದಕಟ್ಟೆ, ಅನ್ನಪೂರ್ಣೇಶ್ವರಿನಗರ ರಸ್ತೆ, ಕೆಬ್ಬೇನಹಳ್ಳಿ, ಮುದ್ದಿನಪಾಳ್ಯ, ಉಲ್ಲಾಳರಸ್ತೆ
*ತುಮಕೂರು ರಸ್ತೆ–ವಿಡಿಯಾ ಫ್ಯಾಕ್ಟರಿ, ಅಂಚೆಪಾಳ್ಯ, ಅಂದರಹಳ್ಳಿ ಮುಖ್ಯರಸ್ತೆ–ಪೀಣ್ಯ ಎರಡನೇ ಹಂತ
*ಹೆಸರಘಟ್ಟ ರಸ್ತೆ–ಸಿಡೇದಹಳ್ಳಿ, ತಮ್ಮೇನಹಳ್ಳಿ, ತೊರೆನಾಗಸಂದ್ರ ಮೂಲಕ ಹೆಸರಘಟ್ಟ ಸಾಗುವ ಮುಖ್ಯರಸ್ತೆ, ಹಾಗೂ ಗೊಲ್ಲಹಳ್ಳಿ–ಹೆಸರಘಟ್ಟ ಮುಖ್ಯರಸ್ತೆ
*ಬಳ್ಳಾರಿ ರಸ್ತೆ–ದೊಡ್ಡಬಳ್ಳಾಪುರ ರಸ್ತೆಯಿಂದ ಬಿಎಂಎಸ್ಐಟಿ ಕಾಲೇಜು, ದೊಡ್ಡಬಳ್ಳಾಪುರ ಕ್ರಾಸ್, ಐವಿಸಿ ರಸ್ತೆ, ಬೂದಿಗೆರೆ ಕ್ರಾಸ್, ಬಾಗಲೂರು, ಸಾದಹಳ್ಳಿ, ರಾಜನಕುಂಟೆ
*ಹಳೇ ಮದ್ರಾಸ್ ರಸ್ತೆ– ಮೇಡಹಳ್ಳಿ, ಆವಲಹಳ್ಳಿ–ರಾಂಪುರ, ರಾಮಮೂರ್ತಿನಗರ ಮತ್ತು ಹೊರಮಾವು
*ಸರ್ಜಾಪುರ ರಸ್ತೆ–ಗುಂಜೂರು, ಕೊಡತಿಗೇಟ್, ಹೊಸಕೋಟೆ ರಸ್ತೆ, ಕನ್ನಮಂಗಲ, ಚಿಕ್ಕತಿರುಪತಿ ರಸ್ತೆ, ಚನ್ನಸಂದ್ರ, ಕಾಟನ್ ಮಲ್ಲೂರ್ ಅಡ್ಡರಸ್ತೆ, ಕಾಡುಗೋಡಿ ರಸ್ತೆ.
ಈ ವಾಹನಗಳಿಗೆ ನಿರ್ಬಂಧವಿಲ್ಲ
ನೀರು, ಪೊಲೀಸ್, ಶವ ಹಾಗೂ ಕಸ ಸಾಗಣೆ ವಾಹನ ಹಾಗೂ ಸೇನಾ ವಾಹನಗಳ ಓಡಾಟಕ್ಕೆ ಸಮಯದ ನಿರ್ಬಂಧವಿಲ್ಲ.
ಈ ವಾಹನಗಳಿಗೆ ಸಮಯ ಮಿತಿ
ಹಾಲು, ಹಾಲಿನ ಉತ್ಪನ್ನಗಳು, ಔಷಧ, ಅಡುಗೆ ಅನಿಲದ ಸಿಲಿಂಡರ್, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಟ್ಯಾಂಕರ್ಗಳು, ರಕ್ಷಣಾ ಇಲಾಖೆಯ ಭಾರಿ ಸರಕು ಸಾಗಣೆ ವಾಹನಗಳು (ಸಿಎಸ್ಡಿ), ಬಿಸಿಯೂಟ ಸರಬರಾಜು, ಅಂಚೆ, ಕಾಂಕ್ರೀಟ್ ಮಿಕ್ಸರ್ ಲಾರಿಗಳು ಹಾಗೂ ಕಟ್ಟಡ ಸಾಮಗ್ರಿ ವಾಹನಗಳು ಬೆಳಿಗ್ಗೆ 8 ರಿಂದ 11 ಹಾಗೂ ಸಂಜೆ 4ರಿಂದ 8 ಗಂಟೆವರೆಗೆ ನಗರದ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ಈ ಸಮಯ ಹೊರತುಪಡಿಸಿ ಉಳಿದ ಯಾವುದೇ ಸಮಯದಲ್ಲಿ ಓಡಾಟ ನಡೆಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.