‘ತೆರೆಯ ಮೇಲೆ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ, ಅದರಲ್ಲೂ ಮೊದಲ ರಾತ್ರಿಯಂತಹ ದೃಶ್ಯಗಳನ್ನು ನಿರ್ವಹಿಸುವುದು ನಿಜಕ್ಕೂ ಕಠಿಣ ಮತ್ತು ಅಷ್ಟೇ ಸವಾಲಿನ ಸಂಗತಿಯಾಗಿದೆ’ ಎಂದು ಕಿರುತೆರೆ ನಟಿ ರಚನಾ ಪರೂಲ್ಕರ್ ಹೇಳಿಕೊಂಡಿದ್ದಾರೆ.
ಪ್ರಸ್ತುತ ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್’ ಪೌರಾಣಿಕ ಧಾರಾವಾಹಿಯಲ್ಲಿ ಮಹಾರಾಣಿ ಅಜಬ್ದೆ ಪುಣವರ್ ಪಾತ್ರಕ್ಕೆ ಬಣ್ಣಹಚ್ಚಿರುವ ರಚನಾ, ಮುಂದಿನ ಎಪಿಸೋಡ್ಗಳಲ್ಲಿ ವೈವಾಹಿಕ ಬದುಕಿನ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಇಂತಹ ಸನ್ನಿವೇಶಗಳನ್ನು ನಿರೂಪಿಸುವ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಈ ದೃಶ್ಯಗಳ ಚಿತ್ರೀಕರಣ ನಡೆಯುತ್ತಿರುವ ವೇಳೆ ನನಗೆ ಕಿರಿಕಿರಿ ಎನಿಸಿದ್ದು ನಿಜ. ಯಾವುದೇ ನಟಿಯರಿಗೆ ಇಂತಹ ದೃಶ್ಯಗಳಲ್ಲಿ ಅಭಿನಯಿಸುವುದು ಕಷ್ಟದ ಕೆಲಸ. ಆದರೆ ಇಂತಹ ಸವಾಲುಗಳನ್ನು ಹೇಗೆ ಎದುರಿಸಿ ಅತ್ಯುತ್ತಮ ನಟನೆ ತೋರುತ್ತೇವೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ’ ಎಂದು ಹೇಳಿಕೊಂಡಿದ್ದಾರೆ ರಚನಾ.
‘ಆದರೆ ಹಿಂದಿನ ಎಲ್ಲಾ ನಟನೆಗಿಂತ ಈ ಪಾತ್ರ ತಂದುಕೊಟ್ಟ ಸಾರ್ಥಕತೆ ಹೆಚ್ಚಿನದು. ಈ ಧಾರಾವಾಹಿಯಲ್ಲಿ ಅಭಿನಯಿಸುತ್ತ ರಾಜಸ್ತಾನದ ಇತಿಹಾಸ, ಸಂಸ್ಕೃತಿ ಹಾಗೂ ಇಲ್ಲಿನ ಯೋಧರ ಬಗ್ಗೆ ಗೌರವ ಭಾವನೆ ಮನೆ ಮಾಡಿದೆ’ ಎಂದು ಹೇಳಿದ್ದಾರೆ.
ಮಹಾರಾಣಾ ಪ್ರತಾಪ್ ಧಾರಾವಾಹಿಯಲ್ಲಿ ಕೆಲಸ ಮಾಡುವುದು ನಿಜಕ್ಕೂ ಖುಷಿ ತಂದಿದೆ ಎನ್ನುತ್ತಾರೆ ಕಿರುತೆರೆ ನಟಿ ರಚನಾ... |
‘ಹಿಂದೆ ಅನೇಕ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಮಹಾರಾಣಾ ಧಾರಾವಾಹಿಯನ್ನು ನಿಜಕ್ಕೂ ಎಂಜಾಯ್ ಮಾಡುತ್ತಿದ್ದೇನೆ’ ಎನ್ನುವುದು ರಚನಾ ವಿವರಣೆ.
80-–90ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಕಥಾಹಂದರವುಳ್ಳ ಧಾರಾವಾಹಿಗಳು ಅತೀ ಹೆಚ್ಚು ಜನಮನ್ನಣೆ ಗಳಿಸಿದ್ದವು. ಅನಂತರದ ದಿನಗಳಲ್ಲಿ ಅದೇ ಕಥೆ, ಅದೇ ತಿರುವುಗಳಿರುವ ಕೌಟುಂಬಿಕ ಧಾರಾವಾಹಿಗಳೇ ಬಹುತೇಕ ಟಿವಿ ಚಾನೆಲ್ಗಳ ಅಗ್ರಪಟ್ಟಿಗೆ ಸೇರಿದವು. ಆದರೆ ಇದೀಗ ಮತ್ತೆ ಪೌರಾಣಿಕ ವಿಷಯಗಳತ್ತ ಟಿವಿ ಜಗತ್ತು ಆಕರ್ಷಿತವಾಗುತ್ತಿದೆ.
ಮಹಿಮಾ ಶನಿದೇವ್ ಕೀ, ಸಾಯಿಬಾಬಾ, ಜೈ ಶ್ರೀ ಕೃಷ್ಣಾ, ಜೈ ಮಾ ದುರ್ಗಾ, ಜೈ ಹನುಮಾನ್, ದೇವೋಂಕಾ ದೇವ್ ಮಹಾದೇವ್ , ಮಹಾದೇವ್ ಪುತ್ರ ಬಾಲ್ಗಣೇಶ್ ಕೀ... ಹೀಗೆ ಸಾಲು ಸಾಲು ಪೌರಾಣಿಕ ಧಾರಾವಾಹಿಗಳು ಹೊಸ ಅಲೆಯನ್ನು ಸೃಷ್ಟಿಸಿದ್ದು, ಈ ಪಟ್ಟಿಗೆ ‘ಮಹಾರಾಣ್ ಪ್ರತಾಪ್’ ಸೇರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.